ಮಂಗಳೂರು: ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಕುಪ್ಪೆಪದವು,ಇರುವೈಲು ಮಾರ್ಗದಲ್ಲಿ ಸರಕಾರಿ ಬಸ್ ಸೇವೆಗೆ ಆಗ್ರಹಿಸಿ ಡಿವೈ ಎಫ್ ವೈ ವತಿಯಿಂದ ಕೆಎಸ್ ಆರ್ ಟಿಸಿ ವಿಭಾಗಾಧಿಕಾರಿಗೆ ಮನವಿ ಮಾಡಲಾಯಿತು.

ಖಾಸಗಿ ಬಸ್ ಗಳು ಮಂಗಳೂರು ನಗರದಿಂದ ಕುಪ್ಪೆಪದವು ಗ್ರಾಮಕ್ಕೆ ಸಂಚರಿಸುತ್ತಿದ್ದರೂ, ಅದರ ಪ್ರಮಾಣ ಸಾಲದು. ವಿದ್ಯಾರ್ಥಿಗಳು, ಕೂಲಿಕಾರರು, ವಿವಿಧ ಉದ್ಯೋಗಳಲ್ಲಿ ತೊಡಗಿಸಿಕೊಂಡವರು ಸೇರಿ ಕೈಕಂಬ, ಮಂಗಳೂರು, ಮೂಡಬಿದ್ರೆಯನ್ನು ದೊಡ್ಡ ಪ್ರಮಾಣದಲ್ಲಿ ಕುಪ್ಪೆಪದವು, ಇರುವೈಲು ಹಾಗು ಸುತ್ತಮುತ್ತಲಿನ ಜನತೆ ಅವಲಂಬಿಸಿದ್ದಾರೆ. ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಈಗಿರುವ ಬಸ್ ಗಳಲ್ಲಿ ವಿಪರೀತ ನೂಕುನುಗ್ಗಲು ಇರುತ್ತದೆ. ಮಹಿಳೆಯರು, ವಿದ್ಯಾರ್ಥಿಗಳಿಗೆ ಪ್ರಯಾಣಿಸುವುದೇ ತೀರಾ ತ್ರಾಸದಾಯಕ ಆಗಿರುತ್ತದೆ. ಇದಲ್ಲದೆ, ಮಧ್ಯಾಹ್ನ, ಭಾನುವಾರ ಸೇರಿದಂತೆ ರಜಾದಿನಗಳಲ್ಲಿ, ದಿನದ ಕೊನೆಯ ಟ್ರಿಪ್ ಗಳಲ್ಲಿ ಖಾಸಗಿ ಬಸ್ ಗಳು ಟ್ರಿಪ್ ಕಟ್ ಮಾಡುವುದರಿಂದ ಗ್ರಾಮಸ್ಥರು ಅನುಭವಿಸುವ ಸಮಸ್ಯೆ ದೊಡ್ಡದಿದೆ. ಇದಲ್ಲದೆ, ಸರಕಾರದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಅವಕಾಶದಿಂದಲೂ ನಮ್ಮ ಗ್ರಾಮದ ಮಹಿಳೆಯರು ವಂಚಿತರಾಗಿದ್ದಾರೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಂಗಳೂರು, ಕುಪ್ಪೆಪದವು ಇರುವೈಲು, ಮೂಡಬಿದ್ರೆ ಮಾರ್ಗವಾಗಿ ಕೆಎಸ್ ಆರ್ ಟಿಸಿ ವತಿಯಿಂದ ತಲಾ ಎರಡು ಬಸ್ ಗಳ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ಕುಪ್ಪೆಪದವು ವಲಯ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ನಗರದ ಬಿಜೈ ನಲ್ಲಿರುವ ಕೆಎಸ್ ಆರ್ ಟಿಸಿ ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ನಿಯೋಗದಲ್ಲಿ ಕುಪ್ಪೆಪದವು ವಲಯ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು ಅಧ್ಯಕ್ಷ ದಿನೇಶ ಇರುವೈಲು, ಕೋಶಾಧಿಕಾರಿ ಜನಾರ್ದನ ಗೌಡ ಎಡಪದವು, ಪದಾಧಿಕಾರಿಗಳಾದ ಭಾಸ್ಕರ ಶೆಟ್ಟಿ ಮುತ್ತೂರು, ಇಬ್ರಾಹಿಂ, ಭವಾನಿ ಕುಪ್ಪೆಪದವು, ಗಣೇಶ್ ಕಾಪಿಕಾಡ್ ಮತ್ತು ಕಟ್ಟಡ ಕಾರ್ಮಿ ಸಂಘದ ಇತರೆ ಮುಖಂಡರು ಉಪಸ್ಥಿತರಿದ್ದರು.


