ಕಾರ್ಕಳ: ನೀರಿನ ಟ್ಯಾಂಕ್ ಮೈ ಮೇಲೆ ಬಿದ್ದು ಮೇಸ್ತ್ರಿ ಸಾವನಪ್ಪಿದ ದುರ್ಘಟನೆ ಅ. 9ರಂದು ಕಾರ್ಕಳ ತಾಲೂಕಿನ ಬೈಲೂರಿನ ಜಾರ್ಕಳದಲ್ಲಿ ನಡೆದಿದೆ.
ಮೇಸ್ತ್ರಿ ಆನಂದ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಜಾರ್ಕಳ ನಿವಾಸಿಯಾಗಿರುವ ಉಮೇಶ್ ಎಂಬವರ ತೋಟದಲ್ಲಿ ಪರ್ಕಳದ ದಯಾನಂದ ಮತ್ತು ಮೇಸ್ತ್ರಿ ಆನಂದ ಎಂಬುವವರು ಶೆಡ್ ನಿರ್ಮಾಣದ ಕೆಲಸ ಮಾಡುತ್ತಿದ್ದಾಗ ಶೆಡ್ನ ಬಳಿ ಹಳೆಯದಾದ ಕಬ್ಬಿಣದ ಸ್ಟಾಂಡ್ ಮೇಲೆ ಇರಿಸಿದ್ದ ಸುಮಾರು 2 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ಮೈ ಮೇಲೆ ಬಿದ್ದಿದ್ದು, ಪರಿಣಾಮವಾಗಿ ದಯಾನಂದ, ಆನಂದ ಹಾಗೂ ಉಮೇಶ್ ಅವರು ಗಾಯಗೊಂಡಿದ್ದರು.

ಈ ವೇಳೆ ತಕ್ಷಣ ಚಿಕಿತ್ಸೆಗಾಗಿ ಗಾಯಾಳುಗಳನ್ನು ಬೈಲೂರು ನರ್ಸಿಂಗ್ ಹೋಂಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಗಂಭೀರವಾಗಿ ಗಾಯಗೊಂಡಿದ್ದ ಆನಂದ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




