ಬಂಟ್ವಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ರಾಜ್ಯ ಉಚ್ಚ ನ್ಯಾಯಾಲಯವು ತನ್ನ ಆದೇಶದಲ್ಲಿ ಸಮೀಕ್ಷೆಯಲ್ಲಿ ಭಾಹವಹಿಸಬೇಕು ಅಥವಾ ಬೇಡವೇ ಎಂಬ ನಿರ್ಣಯವನ್ನು ಜನರ ವಿವೇಚನೆಗೆ ಬಿಟ್ಟ ವಿಚಾರ.
ಈ ಬಗ್ಗೆ ಸರಕಾರ ಅಥವಾ ಆಯೋಗ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಒತ್ತಾಯ ಅಥವಾ ಬಲವಂತ ಪಡಿಸಲಾಗದು ಎಂದು ಆದೇಶ ನೀಡಿದ ಮೇರೆಗೆ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿಯವರು ದಿನಾಂಕ 26/09/2025ರಂದು ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಅಥವಾ ಕುಟುಂಬಗಳ ಸ್ವಯಂ ಇಚ್ಛೆಗೆ ಬಿಡಲಾಗಿದೆ ಎಂದು ಹಾಗೂ ಮಾಹಿತಿಯನ್ನು ನೀಡುವ ಬಗ್ಗೆ ಆಯೋಗ ಒತ್ತಾಯ ಮಾಡುವುದಿಲ್ಲವೆಂದು ಸ್ಪಷ್ಟೀಕರಣ ನೀಡಿರುತ್ತಾರೆ.

ರಾಜ್ಯದಲ್ಲಿನ ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆಯ ಪ್ರಗತಿ ಕುಂಠಿತವಾಗಿರುವ ಹಿನ್ನಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಶಿಬಿರಗಳನ್ನು ಆಯೋಜಿಸುವ ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಮತ್ತು ಗ್ರಂಥಾಲಯ , ಅರಿವು ಕೇಂದ್ರಗಳಿಗೆ ಗುರಿಯನ್ನು ನೀಡಿ ತಾವು ಒತ್ತಡ ಹಾಕುತ್ತಿರುವುದು ತಮ್ಮ ಅಧಿಕೃತ ಜ್ಞಾಪನ ಪತ್ರದಿಂದ ತಿಳಿದು ಬಂದಿರುತ್ತದೆ.

ಆಯೋಗದ ಸದಸ್ಯ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬಹುತೇಕ ಜನರು ಸಮೀಕ್ಷೆಯಲ್ಲಿ ಭಾಗವಹಿಸಲು ಆಶಕ್ತಿ ಹೊಂದಿಲ್ಲವಾದ್ದರಿಂದ ತಾವು ಗ್ರಾ. ಪಂ ಸಿಬ್ಬಂದಿಗಳಿಗೆ ಈ ಮೂಲಕ ಒತ್ತಡಪಡಿಸದೇ ರಾಜ್ಯ ಉಚ್ಚ ನ್ಯಾಯಲಯದ ಆದೇಶದಂತೆ ಜನಸಾಮಾನ್ಯರ ಸ್ವಯಂ ನಿರ್ಧಾರದಂತೆ ಸಮೀಕ್ಷೆ ಮುಂದುವರೆಯಲು ಅವಕಾಶ ಮಾಡಿಕೊಡಬೇಕೆಂದು ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.


