ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ಸೆ.12 ಮದುವೆಗೆ ನಿರಾಕರಿಸಿದ ಕಾರಣಕ್ಕಾಗಿ ಯುವಕನೋರ್ವನಿಂದ ಚೂರಿ ಇರಿತಕ್ಕೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಕೊಕ್ಕರ್ಣೆ ಚೆಗ್ರಿಬೆಟ್ಟು ನಿವಾಸಿ ರಕ್ಷಿತಾ (24) ಚೂರಿ ಇರಿತಕ್ಕೆ ಒಳಗಾಗಿ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಆಕೆಯ ನೆರೆ ಮನೆಯ ಯುವಕ ಕಾರ್ತಿಕ್ ಪೂಜಾರಿ ಕೊಲೆ ಮಾಡಿರುವ ಆರೋಪಿಯಾಗಿದ್ದು ಆತನ ಶವ ಯುವತಿ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.

ಇವರಿಬ್ಬರ ಮಧ್ಯೆ ಪ್ರೀತಿಯ ವಿಚಾರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಆರೋಪಿಯು ರಕ್ಷಿತಾಳನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಆಕೆಯ ಮನೆಯವರು ನಿರಾಕರಿಸಿದ್ದರು ಎನ್ನಲಾಗಿದೆ. ಇತ್ತ ರಕ್ಷಿತಾ ಕೂಡಾ ಆತನನ್ನು ಬ್ಲಾಕ್ ಮಾಡಿದ್ದಳು.ಇದರಿಂದ ಕುಪಿತಗೊಂಡಿದ್ದ ಕಾರ್ತಿಕ್, ರಕ್ಷಿತಾ ಶುಕ್ರವಾರ ಬೆಳಗ್ಗೆ ಕೆಲಸಕ್ಕೆಂದು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಬಂದು ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.

ಕುತ್ತಿಗೆ ಮತ್ತು ಎದೆಯ ಸುತ್ತ ಬಲ ಮತ್ತು ಎಡ ಪಕ್ಕೆಲುಬಿನ ಪ್ರದೇಶದಲ್ಲಿ ತೀವ್ರ ಇರಿತದ ಗಾಯವಾಗಿತ್ತು. ಅಲ್ಲೆ ಕುಸಿದು ಬಿದ್ದಿದ್ದ ರಕ್ಷಿತಾನ್ನು, ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆಯ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆ ಕೊನೆಯುಸಿರೆಳೆದಿದ್ದಾಳೆ. ಇತ್ತ ಕಾರ್ತಿಕ್ ಶವ ಯುವತಿಯ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ತನಿಖೆ ಮುಂದುವರೆದಿದೆ.



