Breaking
22 Mar 2026, Sun

ಪಡುಮಲೆಯಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದಿಂದ ಕಾರ್ಯಾಗಾರ, ಸನ್ಮಾನ ಮತ್ತು ತಾಳಮದ್ದಳೆ

ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ. ರಿ ಮೆಲ್ಕಾರ್ ಬಂಟ್ವಾಳ ಮತ್ತು ಪುತ್ತೂರು ಘಟಕದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹಿರಿಯರ ಕಾರ್ಯಾಗಾರವು ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ದೇವಳದ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಭಟ್ ಚಂದಕೂಡ್ಲು ಕಾರ್ಯಗಾರವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಎಲ್ಲಾ ವರ್ಗದ ಹಿರಿಯರಿಗೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಪ್ರತಿಷ್ಠಾನಕ್ಕೆ ಹೆಚ್ಚಿನ ಬಲವನ್ನು ನೀಡುವ ಕಾರ್ಯವನ್ನು ಎಲ್ಲರೂ ಮಾಡಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿದ್ದ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸತೀಶ್ ರೈ ಕಟ್ಟಾವು, ಶ್ರೀ ಧರ್ಮಸ್ಥಳದ ಜಮಾ ಉಗ್ರಾಣದ ನಿವೃತ್ತ ಮುತ್ಸದ್ದಿ ಬಿ. ಭುಜಬಲಿ ಕಾರ್ಯಗಾರದಿಂದ ಹಿರಿಯರಿಗೆ ಅತ್ಯಂತ ಉಪಯುಕ್ತ ವಿಚಾರಗಳ ಮಾಹಿತಿ ಸಿಗಲಿದ್ದು ಅದರ ಪ್ರಯೋಜನ ಎಲ್ಲರಿಗೂ ಲಭಿಸುವಂತಾಗಲಿ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ ಎ. ವಿ ನಾರಾಯಣ ವಹಿಸಿದ್ದರು. ವೇದಿಕೆಯಲ್ಲಿ ಪ್ರತಿಷ್ಠಾನದ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ ಮತ್ತು ಕೋಶಾಧಿಕಾರಿ ಅನಾರು ಕೃಷ್ಣಶರ್ಮ, ಭವಾನಿ ಶಂಕರ ಶೆಟ್ಟಿ ಉಪಸ್ಥಿತರಿದ್ದರು.

ಈ ವೇಳೆ ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ವಿಕಲಚೇತನ ಮಕ್ಕಳಿಗಾಗಿ ಪ್ರಜ್ಞಾ ಆಶ್ರಮವನ್ನು ನಡೆಸುತ್ತಿರುವ ಅಣ್ಣಪ್ಪ ದಂಪತಿ ಪರವಾಗಿ ಜ್ಯೋತಿ ಅವರನ್ನು ನಿಧಿ ಸಹಿತ ಗೌರವಿಸಲಾಯಿತು.

ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರ, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಿವೃತ್ತ ಮುಖ್ಯ ಗುರು ಶಂಕರಿ.ಕೆ ಪಡುಮಲೆ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಹಿರಿಯರ ಪ್ರತಿಷ್ಠಾನದಿಂದ ಪಡೆದ ಗೌರವದಿಂದ ಅತ್ಯಂತ ಸಂತಸವಾಗಿದೆಯೆಂದು ಸನ್ಮಾನಿತರು ಪ್ರತಿಕ್ರಿಯಿಸಿದರು.

ದಿನನಿತ್ಯದ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆ ಬಗ್ಗೆ ಪುತ್ತೂರು ನಿಧಿ ಪ್ರಾಡಕ್ಟ್ಸ್ ನ ಮಾಲಕರಾದ ಶ್ರೀ ರಾಧಾಕೃಷ್ಣ, ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯ ಮತ್ತು ವಿಮಾ ಯೋಜನೆಗಳ ಮಾಹಿತಿಯನ್ನು ಕುಂಭ ಸಿ ಎ ಬ್ಯಾಂಕಿನ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ಕೈಕಾರ, ಸಾವಯವ ಕೃಷಿಯ ಬಗ್ಗೆ ಡಾ. ಶ್ರೀಮತಿ ನಿವೇದಿತಾ ಮಾಹಿತಿ ನೀಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ದುಗ್ಗಪ್ಪ ನಡುಗಲ್ಲು ಗೋಷ್ಠಿಯನ್ನು ನಿರ್ವಹಿಸಿದರು.

ಶ್ರೀ ಕ್ಷೇತ್ರ ಪಡುಮಲೆಯ ಐತಿಹಾಸಿಕ ಹಿನ್ನೆಲೆ ಮತ್ತು ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಜಯರಾಮ ಪೂಜಾರಿ ಮಾಹಿತಿಯನ್ನು ನೀಡಿದರು.

ಕಾರ್ಯಗಾರದಲ್ಲಿ ಮಂಗಳೂರು ಘಟಕದ ಅಧ್ಯಕ್ಷರಾದ ಭರತ್ ಕೆ, ಬಂಟ್ವಾಳ ಘಟಕದ ಅಧ್ಯಕ್ಷ ಸುಬ್ರಾಯ ಮಡಿವಾಳ, ಪದಾಧಿಕಾರಿಗಳಾದ ಜಿ.ಮಹಾಬಲ ರೈ ಒಳ ತಡ್ಕ, ಬಾಲಕೃಷ್ಣ ಶೆಟ್ಟಿ ಮಂಗಳೂರು, ಶಿವಕುಮಾರ್ ಗಣೇಶ ಆಚಾರ್ಯ ಜಪ್ಪು, ಉದಯಕುಮಾರ್ ಶರವು ಪದ್ಮನಾಭ ನಾಯಕ್, ಚಂಚಲಾಕ್ಷಿ ಪುತ್ತೂರು, ಉದಯಶಂಕರ ರೈ ಪುಣಚ, ಸಂಜೀವ ನಾಯಕ್ ಕಲ್ಲೆಗ, ರಾಮಕೃಷ್ಣ ನಾಯಕ್ ಕೋಕಳ ಮೊದಲಾದ ಪ್ರಮುಖರು ಭಾಗವಹಿಸಿದ್ದರು.

ಶಂಕರಿ ಶರ್ಮಾ ಪುತ್ತೂರು ಮತ್ತು ಲೋಕೇಶ್ ಹೆಗ್ಡೆ ಪುತ್ತೂರು ಸನ್ಮಾನ ಪತ್ರ ವಾಚಿಸಿದರು.ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಪ್ರಸ್ತಾವನೆಗೈದರು.

ಕುಮಾರಿ ಲಾಸ್ಯ ಪಡುಮಲೆ ಪ್ರಾರ್ಥಿಸಿದರು.ಪ್ರತಿಷ್ಠಾನದ ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ ಸ್ವಾಗತಿಸಿ ಜಿಲ್ಲಾ ಸಂಚಾಲಕ ಭಾಸ್ಕರ ಬಾರ್ಯ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಹಿರಿಯರ ಸೇವಾ ಪ್ರತಿಷ್ಠಾನದ ಸದಸ್ಯರಿಂದ ಶ್ರೀರಾಮ ದರ್ಶನ ತಾಳಮದ್ದಳೆ ಜರಗಿತು.

Leave a Reply

Your email address will not be published. Required fields are marked *