ಬಂಟ್ವಾಳ: ಇಲ್ಲೊಂದು ಸರ್ಕಾರಿ ಶಾಲೆ ಇದೆ. ಈ ಶಾಲೆ ಸುಮಾರು 70 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಪ್ರಸ್ತುತ ಇಲ್ಲಿ 95 ಮಂದಿ ಮಕ್ಕಳಿದ್ದರೂ ಕೂಡ ಮುಚ್ಚುವ ಹಂತಕ್ಕೆ ತಲುಪಿದೆ.

ಇದು ಯಾವುದೂ ಬೇರೆ ರಾಜ್ಯದ್ದೂ… ಅಥವಾ ಜಿಲ್ಲೆಯದ್ದೂ ಖಂಡಿತ ಅಲ್ಲ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದೇವಶ್ಯಮುಡೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಸದ್ಯ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಶಾಲೆಯಲ್ಲಿ ಒಟ್ಟು ನಾಲ್ಕು ಮಂದಿ ಸರಕಾರಿ ಶಿಕ್ಷಕರಿದ್ದರು.

ಅದರಲ್ಲಿ ಒಬ್ಬ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಿದ್ದು, ಉಳಿದ 3 ಶಿಕ್ಷಕರ ಪೈಕಿ ಪ್ರಭಾರ ಮುಖ್ಯೋಪಾಧ್ಯಾಯರನ್ನು ಬೇರೆಡೆಗೆ ವರ್ಗಾವಣೆ ಹಂತದಲ್ಲಿದ್ದು ಇದೀಗ ಶಾಲೆಯಲ್ಲಿ ಬರೇ ಇಬ್ಬರು ಶಿಕ್ಷಕರು ಮಾತ್ರ ಇರುವಂತಾಗಲಿದೆ. ವರ್ಗಾವಣೆ ಹಂತದಲ್ಲಿರುವ ಪ್ರಭಾರ ಮುಖ್ಯೋಪಾಧ್ಯಾಯರಾದ ಹರಿಣಾಕ್ಷಿಯವರು ನಮ್ಮ ಶಾಲೆಯ ಹೆಚ್ಚಿನ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇವರ ಮುತುವರ್ಜಿಯಿಂದ ಮಕ್ಕಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಮೀಣ ಪ್ರದೇಶದ ಶಾಲೆಯು ಅಭಿವೃದ್ಧಿಯತ್ತ ಸಾಗುತ್ತಿತ್ತು.
ಈ ಸಮಯದಲ್ಲಿ ಶಿಕ್ಷಕರನ್ನು ವರ್ಗಾವಣೆ ಮಾಡಿದಲ್ಲಿ ಪುನಃ ನಮ್ಮ ಶಾಲೆಯು ಅವನತಿಯ ಅಂಚಿಗೆ ಬರುತ್ತದೆ. ಇದಕ್ಕೆ ಶಿಕ್ಷಣ ಇಲಾಖೆಯೆ ಕಾರಣವಾಗುವುತ್ತದೆ ಎಂದು ಶಾಲಾಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ, ಮಕ್ಕಳ ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ಮಾತ್ರವಲ್ಲ ಈ ಕುರಿತಾಗಿ ಮಂಗಳವಾರ ಶಾಲಾಭಿವೃದ್ಧಿ ಸಮಿತಿ, ಮೇಲುಸ್ತುವಾರಿ ಸಮಿತಿ, ಗ್ರಾಮಸ್ಥರು, ಪೋಷಕರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ. ತುಂಗಪ್ಪ ಬಂಗೇರ ಉಪಸ್ಥಿತರಿದ್ದರು. ಬಳಿಕ ರಾಜ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಪತ್ರವೊಂದನ್ನು ಬರೆದಿದ್ದು ನಮ್ಮ ಊರಿನ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಿ, ಶಿಕ್ಷಕರ ಕೊರತೆಯನ್ನು ನೀಗಿಸಿ. ಈಗ ಇರುವ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡದೆ ನಮ್ಮ ಶಾಲೆಯಲ್ಲಿಯೇ ಖಾಯಂ ಶಿಕ್ಷಕರಾಗಿ ಉಳಿಯುವಂತೆ ಆದೇಶ ಮಾಡಬೇಕಾಗಿ ಅಂತ ವಿನಂತಿಸುತ್ತೇವೆ. ಅಲ್ಲದೆ ನಮ್ಮ ಶಾಲೆಗೆ ಅಗತ್ಯವಿರುವ
- ಶಾಲೆಗೆ ಒಟ್ಟು 6 ಶಿಕ್ಷಕರನ್ನು ನೇಮಕ ಮಾಡಬೇಕು.
- ಶಾಲೆಗೆ ಸಂಬಂಧಿಸಿದ ಜಮೀನಿನನ್ನು ಶಾಲೆಯ ಹೆಸರಿನಲ್ಲಿ ಮಂಜೂರು ಮಾಡಿಸುವುದು.
- ಅಕ್ಷರ ದಾಸೋಹ ಕೊಠಡಿಯು ತೀರಾ ಕಿರಿದಾಗಿದ್ದು, ಮಳೆಗಾಲದಲ್ಲಿ ಸೋರುವುದರಿಂದ ಅದನ್ನು ದೊಡ್ಡದಾಗಿ ಹೊಸತಾಗಿ ನಿರ್ಮಿಸುವರೆ ಕೇಳಿಕೆ.
- ಶಾಲೆಗೆ ಸುಸಜ್ಜಿತವಾದ ರಂಗಮಂದಿರ ನಿರ್ಮಿಸಿಕೊಡುವಂತೆ
- ಶಾಲೆಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಮಾಡುವುದು.
- ಈಗಾಗಲೇ ಎಂ ಆರ್ ಪಿ ಎಲ್ ನಿಂದ 3 ಶಾಲಾ ಕೊಠಡಿ ಮಂಜೂರಾಗಿದ್ದು, ಉಳಿಕೆ 3 ಕೊಠಡಿಗಳನ್ನು ಇಲಾಖೆಯಿಂದ ನಿರ್ಮಿಸಿಕೊಡುವಂತೆ ಕೇಳಿಕೆ.
- ಗ್ರಂಥಾಲಯ ಹಾಗೂ ಗ್ರಂಥಾಲಯ ಕೊಠಡಿಯನ್ನು ಒದಗಿಸುವಂತೆ ಕೇಳಿಕೆ.
- ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಒದಗಿಸುವರೆ ಕೇಳಿಕೆ
ಈ ಮೇಲೆ ವಿವರಿಸಿದ ಬೇಡಿಕೆಗಳನ್ನು ಈಡೇರಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿ ಶಿಕ್ಷಣ ಅಧಿಕಾರಿಗಳ ಸಮ್ಮುಖದಲ್ಲಿ ಮನವಿ ಸಲ್ಲಿಸಿದರು. ಶಿಕ್ಷಣ ಸಚಿವರು ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಅನ್ನುವ ನಿರೀಕ್ಷೆಯಲ್ಲಿದ್ದಾರೆ ಇಲ್ಲಿನ ಪೋಷಕರು ಹಾಗೂ ಗ್ರಾಮಸ್ಥರು.




