ಕುಂದಾಪುರ: ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೈಂದೂರಿನ ಗುಂಜನಗುಡ್ಡೆ ನಿವಾಸಿ ಅಬ್ದುಲ್ ಖಯೂಮ್ (26) ಮತ್ತು ಕಲಿನ ಮನೆ ನಿವಾಸಿ ರಮೇಶ್ ಮೊಗವೀರ (40) ಎಂದು ಗುರುತಿಸಲಾಗಿದೆ.

ಜುಲೈ 31ರ ಮುಂಜಾನೆ 4 ಗಂಟೆ ಸುಮಾರಿಗೆ ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮೇಶ್ ಬಿ. ಎನ್ ನೇತೃತ್ವದ ತಂಡಕ್ಕೆ ಅಕ್ರಮ ಗೋ ಸಾಗಾಟದ ಮಾಹಿತಿ ದೊರೆತ್ತಿದ್ದು ಈ ಬೆನ್ನಲ್ಲೆ ಕಾರ್ಯಪ್ರವೃತರಾದ ಪೊಲೀಸರು ಹೇರೂರಿನ ಚಟ್ಗುಳಿ ಕಡೆಯಿಂದ ಬರುವ ರಸ್ತೆಯ ಗುಂಜನಗುಡ್ಡೆ ಬಳಿ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನು ತಡೆದಿದ್ದಾರೆ.

ಬಳಿಕ ವಾಹನ ಪರಿಶೀಲನೆ ನಡೆಸಿದಾಗ, ಪೊಲೀಸರಿಗೆ ವಾಹನದಲ್ಲಿ ಕಂದು ಜೆರ್ಸಿ ತಳಿಯ ಹಸುವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಹಸುವನ್ನು ರಕ್ಷಿಸಿದ್ದು, ಅಪರಾಧಕ್ಕೆ ಬಳಸಿದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನೂ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



