ಬಂಟ್ವಾಳ : ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ವತಿಯಿಂದ ಆ.3 ಆದಿತ್ಯವಾರದಂದು ಸಂಘಟನೆಯ 5 ನೇ ವರ್ಷದ “ಗದ್ದೆಯಲ್ಲಿ ಸೇರೋಣ ವ್ಯವಸಾಯ ಮಾಡೋಣ” ಎಂಬ ವಿಶೇಷ ಕಾರ್ಯಕ್ರಮ ಕಡೆ ಶಿವಾಲಯ ಗ್ರಾಮದ ಪುಣ್ಕೆದಡಿ ಎಂಬಲ್ಲಿ ಜರಗಲಿರುವುದು.

ಸಂಘಟನೆಯು ಕಳೆದ ಐದು ವರ್ಷಗಳಿಂದ ಗ್ರಾಮದಲ್ಲಿ ಗದ್ದೆ ಸಾಗುವಳಿ ಮಾಡದೆ ಹಡಿಲು ಬಿದ್ದ ಗದ್ದೆಯನ್ನು ಗುರುತಿಸಿ ಬತ್ತದ ಕೃಷಿ ಮಾಡಿ ಅದರಿಂದ ಬರುವ ಆದಾಯವನ್ನು ಸಮಾಜದ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿದೆ.

ಬೆಳಿಗ್ಗೆ ಉತ್ಸಾಹಿ ಯುವಕ ಯುವತಿಯರಿಗೆ ಮತ್ತು ಮಕ್ಕಳಿಗಾಗಿಯೇ ವಿಶೇಷವಾಗಿ ಕೆಸರುಗದ್ದೆಯಲ್ಲಿ “ಕೆಸರ್ದ ಕಂಡೊಡು ಕುಸಲ್ದ ಗೊಬ್ಬು” ಎನ್ನುವ ವಿವಿಧ ಕ್ರೀಡಾಕೂಟಗಳು ಜರಗಲಿದ್ದು, ಗದ್ದೆಯ ಒಂದು ಬದಿಯಲ್ಲಿ ಹಿರಿಯರು ಗದ್ದೆ ನಾಟಿ ಮಾಡುತ್ತಾ ಕಿರಿಯರಿಗೆ ನೇಜಿ ನೆಡುವ ಮತ್ತು ಗದ್ದೆ ಬೇಸಾಯದ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತಾರೆ. ಇನ್ನೊಂದು ಕಡೆಯಲ್ಲಿ ಆಟೋಟ ಸ್ಪರ್ಧೆಗಳನ್ನು ನಡೆಸುತ್ತಿರುತ್ತಾರೆ.

ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ (ರಿ) ನ ಅಧ್ಯಕ್ಷರಾದ ಯಶವಂತ ಸಾಲಿಯಾನ್ ಪತ್ತುಕೊಡಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



