ಬೆಳ್ತಂಗಡಿ: ಯುವಕನೊಬ್ಬ ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ.ಮೌಲ್ಯದ ಚಿನ್ನದ ಬ್ರಾಸ್ ಲೈಟ್ ನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಬೆಳ್ತಂಡಿಯಲ್ಲಿ ನಡೆದಿದೆ.
ತಾಲೂಕಿನ ಬಳಂಜದ ಅಳದಂಗಡಿ ಸತ್ಯದೇವತೆ ಎಂಟರ್ ಪ್ರೈಸಸ್ ಮಾಲಕರಾಗಿರುವ ಜಗದೀಶ್ ಪೂಜಾರಿ ಪೆರಾಜೆ ಚಿನ್ನದ ಬ್ರಾಸ್ ಲೈಟ್ ನ್ನು ವಾರಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದ ವ್ಯಕ್ತಿಯಾಗಿದ್ದಾರೆ.
ಇವರ ಈ ನಡೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಮೇ 19 ರಂದು ಕಾಪಿನಡ್ಕದ ಯುವಕ ರಾಕೇಶ್ ಎಂಬವರ ಸುಮಾರು ಎರಡು ಲಕ್ಷ ಮೊತ್ತದ ಚಿನ್ನದ ಬ್ರಾಸ್ ಲೈಟ್ ಬೆಳಿಗ್ಗೆ ಕಾರ್ಯಕ್ರಮಕ್ಕೆ ತೆರಳುವಾಗ ಕಳೆದು ಹೋಗಿತ್ತು. ಅವರು ಬಳಂಜ, ಗುರುವಾಯನಕೆರೆ, ಪಡಂಗಡಿ, ಮಡಂತ್ಯಾರು ಕಡೆ ಹುಡುಕಿದರೂ ಸಿಗಲಿಲ್ಲ.
ಬ್ರಾಸ್ ಲೈಟ್ ಕಳೆದು ಹೋದ ಬಗ್ಗೆ ಸೋಶಿಯಲ್ ಮಿಡೀಯದಲ್ಲಿ ಹಾಕಿದ್ದರು. ಬಳಂಜದ ಯುವಕ ಜಗದೀಶ್ ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ತನ್ನ ತಾಯಿ ಜೊತೆ ಹೋಗಿ ರಾತ್ರಿ 8 ಗಂಟೆ ಸಮಯಕ್ಕೆ ಹಿಂತಿರುಗಿ ಬರುವಾಗ ಕಾಪಿನಡ್ಕ ರಸ್ತೆಯಲ್ಲಿ ಚಿನ್ನದ ಬ್ರಾಸ್ ಲೈಟ್ ಸಿಕ್ಕಿದೆ.

ಕೂಡಲೇ ಕಾರಿಂದಿಳಿದು ಬ್ರಾಸ್ ಲೈಟ್ ತೆಗೆದುಕೊಂಡು ಮನೆಗೆ ಬಂದು ವಿಚಾರಿಸಿದಾಗ ಅದು ರಾಕೇಶ್ ಕಾಪಿನಡ್ಕದವರದೆಂದು ಗೊತ್ತಾಗಿದೆ. ಕೂಡಲೇ ಜಗದೀಶ್ ಅವರು ಅವರ ಮನೆಗೆ ತೆರಳಿ ಬ್ರಾಸ್ ಲೈಟ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಮನೆಯವರು ಜಗದೀಶ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ದೈವ ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ಎಂದು ಶುಭ ಹಾರೈಸಿದ್ದಾರೆ.



