ಸಿದ್ದಕಟ್ಟೆ : ಇತ್ತೀಚಿಗೆ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಮರಣ ಹೊಂದಿರುವ 27 ಮಂದಿ ಭಾರತೀಯ ಹಿಂದೂಗಳ ದಿವ್ಯಾತ್ಮಕ್ಕೆ ಚಿರಶಾಂತಿ ಮತ್ತು ಸದ್ಗತಿ ಪ್ರಾಪ್ತಿಯಾಗಲು ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ವತಿಯಿಂದ ಮೃತ ಗಣ್ಯರಿಗೆ ಮೌನ ಪ್ರಾರ್ಥನೆ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು .
ಭಯೋತ್ಪಾದಕರ ಈ ರೀತಿಯ ಕ್ರೂರವಾದ ದಾಳಿಯನ್ನು ಖಂಡಿಸಿ ಖಂಡನ ನಿರ್ಣಯವನ್ನು ಕೈಗೊಂಡು ಕೇಂದ್ರ ಸರಕಾರದ ಗೃಹ ಇಲಾಖಾ ಸಚಿವಾಲಯಕ್ಕೆ ಕಳುಹಿಸಿಕೊಡಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಯಿತು. ಉಗ್ರರ ದಾಳಿಯನ್ನು ಖಂಡಿಸುವುದರೊಂದಿಗೆ ಭಾರತೀಯರೆಲ್ಲರೂ ಕೇಂದ್ರ ಸರಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೆ ಮತ್ತು ಸೇನೆ ಪಡೆಗಳು ನಡೆಸುವ ಎಲ್ಲಾ ಕಾರ್ಯಗಳಿಗೆ ನಿಂತು ರಾಷ್ಟ್ರದ ಭದ್ರತೆಗೆ ಸಹಕರಿಸಬೇಕು ಹಾಗೂ ರಾಷ್ಟ್ರದ ವಿಷಯ ಬಂದಾಗ ಜಾತಿ ಮತ್ತು ಧರ್ಮವನ್ನೂ ದೂರವಿಟ್ಟು ದೇಶದ ಬಗ್ಗೆ ಚಿಂತನೆ ಮಾಡುವ ಅಗತ್ಯತೆ ಇದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ,ಉಪಾಧ್ಯಕ್ಷ ಸಂದೇಶ್ ಶೆಟ್ಟಿ ,ನಿರ್ದೇಶಕರಾದ ರಶ್ಮಿತ್ ಶೆಟ್ಟಿ ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಸತೀಶ್ ಪೂಜಾರಿ, ದಿನೇಶ್ ಪೂಜಾರಿ , ಚಂದ್ರಶೇಖರ ಶೆಟ್ಟಿ , ವಿಶ್ವನಾಥ ಶೆಟ್ಟಿಗಾರ್, ಜಾರಪ್ಪ ನಾಯ್ಕ, ಶಿವಗೌಡ, ಮಂದಾರತಿ ಎಸ್ ಶೆಟ್ಟಿ , ಪುಷ್ಪಲತಾ ಎಸ್ ಆರ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ , ಹಾಗೂ ದ.ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪ್ರಭಾಕರ ಹೆಚ್, ಆರಂಬೋಡಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಆಶಾ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.