Breaking
23 Mar 2026, Mon

ತುಂಬೆ ಫೆಸ್ಟ್: ಎ.11 ರಿಂದ  ಬೃಹತ್ ಮೇಳಯಶಸ್ವಿಗೊಳಿಸಲು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಕರೆ

ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯರಿಗೆ ಅನುಕೂಲವಾಗುವಂತೆ ತುಂಬೆಯಲ್ಲಿ “ತುಂಬೆ ಫೆಸ್ಟ್ -2025” ಕಾರ್ಯಕ್ರಮವನ್ನು ಎ.11 ರಿಂದ ಎ.13 ರವರೆಗೆ ವಿವಿಧ ಆಹಾರ ಮತ್ತು ಇನ್ನಿತರ ಮಳಿಗೆಗಳೊಂದಿಗೆ ಮೂರು ದಿನಗಳು ಸೌಹಾರ್ದ ಸಮ್ಮೇಳನವಾಗಿ ನಡೆಯಲಿದ್ದು ಸುತ್ತಮುತ್ತಲಿನ ಗ್ರಾಮಗಳಲ್ಲದೆ ಸಾರ್ವಜನಿಕರು ಭಾಗವಹಿಸುವಂತೆ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಕರೆ ನೀಡಿದ್ದಾರೆ.

ಅವರು ತುಂಬೆ ಬಿ.ಎ. ಕಾಲೇಜಿನಲ್ಲಿ ಕಾರ್ಯಕ್ರಮದ ಪೂರ್ವ ತಯಾರಿ ಪ್ರಯುಕ್ತ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತುಂಬೆ ಫೆಸ್ಟ್ ಬಗ್ಗೆ ಮಾಹಿತಿ ನೀಡಿದರು.

ಫೆಸ್ಟ್ ನಲ್ಲಿ ಯೇನಪೋಯ ವಿಶ್ವವಿದ್ಯಾನಿಲಯದಿಂದ ಆರೋಗ್ಯ ತಪಾಸಣಾ ಶಿಬಿರ , ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಿಂದ ಉದ್ಯೋಗ ಮಾಹಿತಿ, ಆಹಾರ ಮೇಳ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉಮೇಶ್ ಮಿಜಾರ್ ತಂಡದಿಂದ ತೆಲಿಕೆದ ಗೊಂಚಿಲು, ಪಿಲಿ ನಲಿಕೆ, ಚೆಂಡೆ ವಾದನ, ಬಹುಭಾಷಾ ಕವಿಗೋಷ್ಠಿ , ದಫ್, ಭರತನಾಟ್ಯ, ಅಂತಾರಾಷ್ಟ್ರೀಯ ಖ್ಯಾತಿಯ ಬಾಲಿವುಡ್ ರಾಕ್ ಮ್ಯೂಸಿಕ್ ಮೊದಲಾದ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷರು ಯಾವುದೇ ಕುಂದು ಕೊರತೆ ಆಗದಂತೆ ಸೂಕ್ತ ವ್ಯವಸ್ಥೆ ಹಾಗೂ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಲ್ಲಾ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಅಗತ್ಯ ಸ್ಥಳಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಪೋಲಿಸ್ ಇಲಾಖೆಗೆ ತಿಳಿಸಿದರು. ಅಗ್ನಿಶಾಮಕ ದಳ , ಮೆಸ್ಕಾಂ ಅಧಿಕಾರಿಗಳು ಸನ್ನದ್ಧವಾಗಿರುವಂತೆ ಹೇಳಿದರು.

ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಕಾರ್ಯಕ್ರಮದ ವಿವಿರ ನೀಡಿದರು. ಎ. 11 ರಂದು ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ , ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚಿನ ಧರ್ಮಗುರು ರೆ.ಫಾ.ವಲೇರಿಯನ್ ಡಿಸೋಜ ಮತ್ತು ಮಿತ್ತಬೈಲು ಮಸೀದಿಯ ಅಲ್‌ಹಾಜ್ ಕೆ.ಪಿ. ಇರ್ಶಾದ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಸಭೆಯಲ್ಲಿ ಮಾಜಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪ್ರಾಂಶುಪಾಲ ವಿ. ಸುಬ್ರಮಣ್ಯ ಭಟ್, ತುಂಬೆ ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಬಿ.ಎ. ಸಮೂಹ ಸಂಸ್ಥೆಯ ನಿರ್ದೇಶಕ ಅಬ್ದುಲ್ ಸಲಾಂ, ಅಬ್ದುಲ್ ಅಶ್ರಫ್ , ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ್ ಚೌಟ ಬದಿಗುಡ್ಡೆ , ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ , ಪೋಲಿಸ್ ಇನ್ಸ್ಪೆಕ್ಟರ್ ಶಿವಕುಮಾರ್, ಸಂಚಾರಿ ಠಾಣೆ ಎಸ್.ಐ ಸುತೇಶ್ ಕುಮಾರ್ ಮೊದಲಾದವರಿದ್ದರು.

ಬಿ.ಎ ಐಟಿಐ ಪ್ರಾಂಶುಪಾಲ ನವೀನ್ ಪ್ರಸ್ತಾವನೆ ಗೈದರು. ಸಂಸ್ಥೆಯ ಅಧೀಕ್ಷಕ ಬಿ.ಅಬ್ದುಲ್ ಕಬೀರ್ ನಿರೂಪಿಸಿದರು.

Leave a Reply

Your email address will not be published. Required fields are marked *