ಮಂಗಳೂರು: ವಿವಿಧ ಪಾತ್ರಗಳಿಗೆ ಬಣ್ಣಹಚ್ಚಿ ಪ್ರೇಕ್ಷಕರನ್ನು ಮನರಂಜಿಸಿದ್ದ ತುಳು ರಂಗ ಭೂಮಿ ಕಲಾವಿದ ಸುರೇಶ್ ವಿಟ್ಲ (49) ಏ.06ರಂದು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ಇವರನ್ನು ತಕ್ಷಣ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದಿದ್ದು, ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ.
ಸುಮಾರು 20 ವರ್ಷಗಳಿಂದ ಮಂಜೇಶ್ವರ ಶಾರದ ಆರ್ಟ್ಸ್ ನಲ್ಲಿ ಕೆಲಸ ನಿರ್ವಹಿಸಿದ್ದ ಇವರು ಪೋಷಕ ಪಾತ್ರ , ಖಳನಾಯಕ, ಸ್ತ್ರೀ, ಹಾಸ್ಯ ಹೀಗೆ 18ಕ್ಕೂ ಅಧಿಕ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಇವರ ಅಕಾಲಿಕ ಸಾವು ತುಳುರಂಗಭೂಮಿಗೆ ಆಘಾತ ನೀಡಿದೆ.
ಕಲಾವಿದನ ಸಾವಿಗೆ ಸಹಕಲಾವಿದರು, ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಮೃತರು ಪತ್ನಿ ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರ ಇಂದು (ಏ. 07) ವಿಟ್ಲದಲ್ಲಿ ನಡೆಸುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.



