ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಫೆ. 6 ಮತ್ತು 7ರಂದು ಜರಗಿದ ತುಳುನಾಡ್ದ ಜಾತ್ರೆ-ಶ್ರೀಒಡಿಯೂರು ರಥೋತ್ಸವ-ಶ್ರೀ ಗುರುದೇವ ಅಧ್ಯಾತ್ಮ ಕೇಂದ್ರ ಲೋಕಾರ್ಪಣೆ -25ನೇ ತುಳು ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಗುರು ಬಂಧುಗಳಿಗೆ ಕೃತಜ್ಞತೆ ಸಮರ್ಪಣೆ ಮತ್ತು ಅಭಿನಂದನೆ ಸಭೆ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಧನಾತ್ಮಕ ಮತ್ತು ಋಣಾತ್ಮಕ ನಡವಳಿಕೆ ಬಗ್ಗೆ ಅರಿವಿರಬೇಕು. ಇತರರನ್ನು ತಿದ್ದುವ ಬದಲು ನಮ್ಮನ್ನು ನಾವು ತಿದ್ದಿಕೊಂಡು ನಮ್ಮೊಳಗೆ ಪರಿವರ್ತನೆ ತಂದುಕೊಳ್ಳಬೇಕು. ಸಾಮಾಜಿಕ ಬದ್ಧತೆಯಿದ್ದಾಗ ಯೋಚನೆ ಮತ್ತು ಯೋಜನೆ ಯಶಸ್ವಿಯಾಗುತ್ತವೆ. ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಉತ್ತಮ ರೀತಿಯಲ್ಲಿ ನಡೆಯಲು ಇದೇ ಕಾರಣವಾಗಿದೆ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಂಜನೇಯನ ಲೋಹದ ವಿಗ್ರಹ ಸ್ಥಾಪನೆ ಉದ್ದೇಶವಿದೆ. ಅದಕ್ಕಾಗಿ ಸಿದ್ಧತೆಗಳಾಗುತ್ತಿವೆ. ಉತ್ತಮ ಸೂಕ್ತ ಸ್ಥಳವನ್ನು ಆಯ್ದು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಒಡಿಯೂರು ಶ್ರೀಗಳು ಹೇಳಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಾಧ್ವಿ ಮಾತಾನಂದಮಯಿ ಒಡಿಯೂರು ರಥೋತ್ಸವ ತುಳುನಾಡು ಜಾತ್ರೆ ಯಶಸ್ಸಿಗೆ ಗುರುಬಂಧುಗಳ, ಸಂಸ್ಥಾನದ ಭಕ್ತರ ತನುಮನಧನಗಳ ಸಹಕಾರ ಕಾರಣ. ಒಗ್ಗಟ್ಟಿನ ಬಲದಿಂದ ಅತ್ಯುತ್ತಮ ರೀತಿಯಲ್ಲಿ ಕಾರ್ಯಕ್ರಮಗಳು ಜರಗಿದವು ಎಂದರು.
ವಿವಿಧ ಸಮಿತಿಗಳ ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು. ರಥೋತ್ಸವ ಕಾರ್ಯಕ್ರಮಗಳ ಅವಲೋಕನ ನಡೆಯಿತು.ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಕೋಶಾಧಿಕಾರಿ ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಸಹಕಾರಿ ರತ್ನ ಎ. ಸುರೇಶ್ ರೈ, ಉಪಾಧ್ಯಕ್ಷ ಪನೆಯಡ್ಕ ಲಿಂಗಪ್ಪ ಗೌಡ ಆರ್ಥಿಕ ಸಮಿತಿಯ ಜಮ್ಮದಮನೆ ಶಶಿಧರ ಶೆಟ್ಟಿ, ಹರಿಣಾಕ್ಷಿ ಜಮ್ಮದಮನೆ ಮೊದಲಾವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಥೋತ್ಸವ ಸಮಿತಿ ಕಾರ್ಯದರ್ಶಿ ಯಶವಂತ ವಿಟ್ಲ ಸ್ವಾಗತಿಸಿದರು.ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಹಣಾಧಿಕಾರಿ ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




