Breaking
1 Sep 2026, Tue

ಮಂಗಳೂರಿನ ನಾಗರಿಕ ಸೌಲಭ್ಯಕ್ಕೆ ರೋಹನ್ ಕಾರ್ಪೊರೇಶನ್‌ನ ಕೊಡುಗೆ; ನೂತನ ಬಸ್ ತಂಗುದಾಣ ಉದ್ಘಾಟನೆ

ಮಂಗಳೂರು: ಮಂಗಳೂರಿನ ಕಪಿತಾನಿಯೊದಲ್ಲಿ ರೋಹನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನೂತನವಾಗಿ ನಿರ್ಮಿಸಲಾದ ‘ರೋಹನ್ ಸ್ಕ್ವೇರ್ ಬಸ್ ತಂಗುದಾಣ’ ವನ್ನು ಉದ್ಘಾಟಿಸಲಾಯಿತು.

ನಗರದ ನಾಗರಿಕ ಮೂಲಸೌಕರ್ಯವನ್ನು ಬಲಪಡಿಸುವ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆ. ಕರ್ನಾಟಕ ವಿಧಾನಸಭೆಯ ಸದಸ್ಯರಾದ ಶ್ರೀ ಡಿ. ವೇದವ್ಯಾಸ ಕಾಮತ್ ಅವರು ನೂತನ ಬಸ್ ತಂಗುದಾಣವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರೋಹನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೆರೊ, ನಿರ್ದೇಶಕರಾದ ಶ್ರೀ ಡಿಯೋನ್ ಮೊಂತೆರೊ, ಕಾರ್ಪೊರೇಟರ್ ಶ್ರೀ ಸಂದೀಪ್ ಗರೋಡಿ, ರೋಹನ್ ಕಾರ್ಪೊರೇಶನ್ ನ ಜನರಲ್ ಮ್ಯಾನೇಜರ್ ಶ್ರೀಮತಿ ಸುಮನಾ, ಶ್ರೀ ಜೇಮ್ಸ್ ಸೇರಿದಂತೆ ಇತರ ಗಣ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ. ವೇದವ್ಯಾಸ ಕಾಮತ್ ಅವರು, “ಜನರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುವ ಕೆಲಸವೇ ನಿಜವಾದ ಸೇವೆ. ಆ ನಿಟ್ಟಿನಲ್ಲಿ, ಸಾರ್ವಜನಿಕರ ದೈನಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ರೋಹನ್ ಕಾರ್ಪೊರೇಶನ್ ಕೈಗೊಂಡಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಂಗಳೂರಿನ ಜನರಿಗೆ ಉಪಯುಕ್ತವಾಗುವ ಇಂತಹ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಆಶಿಸುತ್ತೇನೆ.” ಎಂದು ಹೇಳಿದರು.

ಕಾರ್ಪೊರೇಟರ್ ಶ್ರೀ ಸಂದೀಪ್ ಗರೋಡಿ ಅವರು ಮಾತನಾಡಿ, “ಮಂಗಳೂರಿನ ಬೆಳವಣಿಗೆಯಲ್ಲಿ ರೋಹನ್ ಕಾರ್ಪೊರೇಶನ್ ನ ಕೊಡುಗೆ ಗಮನಾರ್ಹವಾಗಿದೆ. ತಮ್ಮ ಯೋಜನೆಗಳ ಜೊತೆಗೆ ನಗರದ ಜನಜೀವನಕ್ಕೂ ಉಪಯೋಗವಾಗುವ ಕೆಲಸಗಳಿಗೆ ಆದ್ಯತೆ ನೀಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ . ಈ ರೀತಿಯ ಜನಪರ ಕಾರ್ಯಗಳು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ನಡೆಯಲಿ, ಮಂಗಳೂರಿನ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲಿ.” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ. ರೋಹನ್ ಮೊಂತೆರೊ ಅವರು ಮಾತನಾಡಿ, “ಮಂಗಳೂರಿನೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ಸಂಸ್ಥೆಯಾಗಿ, ನಮ್ಮ ಜವಾಬ್ದಾರಿ ನಮ್ಮ ಯೋಜನೆಗಳಿಗಷ್ಟೇ ಸೀಮಿತವಾಗಿಲ್ಲ ಎಂದು ನಾವು ನಂಬುತ್ತೇವೆ. ಸಾರ್ವಜನಿಕರ ದೈನಂದಿನ ಬದುಕಿಗೆ ಅನುಕೂಲವಾಗುವಂತಹ ಕಾರ್ಯಗಳ ಮೂಲಕ ನಗರಕ್ಕೆ ಕೊಡುಗೆ ನೀಡುವುದು ನಮ್ಮ ಬದ್ಧತೆಯ ಭಾಗವಾಗಿದೆ. ಈ ಬಸ್ ತಂಗುದಾಣವು ಆ ನಿಟ್ಟಿನಲ್ಲಿ ನಮ್ಮ ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ.” ಎಂದು ಹೇಳಿದರು.

ಸೌಜನ್ಯ ಹೆಗ್ಡೆ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಮಂಗಳೂರಿನ ಅಭಿವೃದ್ಧಿಯಲ್ಲಿ ಹಲವು ವರ್ಷಗಳಿಂದ ಭಾಗಿಯಾಗಿರುವ ರೋಹನ್ ಕಾರ್ಪೊರೇಶನ್, ನಗರದ ಅಭಿವೃದ್ಧಿಯೊಂದಿಗೆ ಸಾರ್ವಜನಿಕರ ಬದುಕಿಗೆ ಅನುಕೂಲವಾಗುವ ಕಾರ್ಯಗಳಲ್ಲೂ ತನ್ನ ಪಾಲಿನ ಕೊಡುಗೆ ನೀಡುತ್ತಾ ಬಂದಿದೆ. ನಗರ ಮತ್ತು ಸಮುದಾಯದ ಹಿತಕ್ಕಾಗಿ ಇಂತಹ ಕಾರ್ಯಗಳನ್ನು ಮುಂದುವರಿಸುವ ಮೂಲಕ ತನ್ನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.

Leave a Reply

Your email address will not be published. Required fields are marked *