ಕಾಸರಗೋಡು: ಮನೆಯ ಸಮೀಪದ ಕೆರೆಯಲ್ಲಿ ಸ್ನಾನಕ್ಕೆ ತೆರಳಿದ್ದ ಪ್ಲಸ್ ಒನ್ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉದಯಗಿರಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ವಿದ್ಯಾನಗರ ಚಾಲ ಮೂಲದ, ಪ್ರಸ್ತುತ ಉದಯಗಿರಿಯಲ್ಲಿ ವಾಸಿಸುತ್ತಿರುವ ಅಬೂಬಕರ್ ಅವರ ಪುತ್ರ ಮುಹಮ್ಮದ್ ಶಾಹಿಲ್ (15) ಮೃತಪಟ್ಟ ಬಾಲಕ. ಶಾಹಿಲ್ ಪ್ಲಸ್ ಒನ್ ವಿದ್ಯಾರ್ಥಿಯಾಗಿದ್ದು, ಶಾಲೆಯಲ್ಲಿ ಓಣಂ ಪರೀಕ್ಷೆ ಬರೆಯಲು ತೆರಳುವ ಮುನ್ನ ಮನೆಯ ಸಮೀಪದ ಕೆರೆಗೆ ಸ್ನಾನ ಮಾಡಲು ಹೋಗಿದ್ದ ಎನ್ನಲಾಗಿದೆ.

ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಆಳವಾದ ನೀರಿಗೆ ಜಾರಿದ ಶಾಹಿಲ್ ನೀರಿನಲ್ಲಿ ಮುಳುಗಿದ್ದಾನೆ. ಕೆಲ ಸಮಯದ ಬಳಿಕ ಶಾಹಿಲ್ ಕಾಣೆಯಾಗಿರುವುದು ಗಮನಕ್ಕೆ ಬಂದಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯರು ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಶಾಹಿಲ್ ನೀರಿನಲ್ಲಿ ಮುಳುಗಿರುವುದು ಪತ್ತೆಯಾಗಿದೆ.

ತಕ್ಷಣವೇ ಆತನನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.






