ಬೆಳ್ತಂಗಡಿ: ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಳೆಕೋಟೆ, ಬೆಳ್ತಂಗಡಿಯ ವಿದ್ಯಾರ್ಥಿನಿ ಕು. ಪ್ರಾಪ್ತಿ ಎಂ. ಗೌಡ ಅವರನ್ನು ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಲಾಯಿತು.

ಪುತ್ತೂರು ತಾಲೂಕು ಯುವಜನ ಇಲಾಖೆ ಪ್ರಶಸ್ತಿ ಪುರಸ್ಕೃತ ಶ್ರೀ ಕೃಷ್ಣ ಯುವಕ ಮಂಡಲ (ರಿ.) ಸಿಟಿಗುಡ್ಡೆ, ಪುತ್ತೂರು, ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು (ರಿ.), ಹಾಗೂ ರಕ್ತ ಸಂಜೀವಿನಿ ಬ್ಲಡ್ ಗ್ರೂಪ್, ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 12, 2026ರಂದು ಪ್ರಾಪ್ತಿ ಅವರ ಮನೆಯಲ್ಲಿ ಈ ಗೌರವ ಸಮಾರಂಭ ನಡೆಯಿತು.

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಸಮೀಪದ ಕುವೆಟ್ಟು ಗ್ರಾಮದ ಶಕ್ತಿ ನಗರದ ನಿವಾಸಿಗಳಾದ ಉಪನ್ಯಾಸಕ ಮಹಾಬಲ ಗೌಡ ಹಾಗೂ ಉಪನ್ಯಾಸಕಿ ಮೀನಾಕ್ಷಿ ಅವರ ಪುತ್ರಿ ಪ್ರಾಪ್ತಿ ಅವರು ಶೈಕ್ಷಣಿಕ ಸಾಧನೆಯ ಜೊತೆಗೆ ನೃತ್ಯ, ಭಾಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಿರುವ ಹಿನ್ನೆಲೆಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಕಬಕದ ಸಾಹಿತಿ-ಶಿಕ್ಷಕಿ ಡಾ. ಶಾಂತಾ ಪುತ್ತೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ವಾಸು ನಾಯ್ಕ್, ನಿಸರ್ಗ ಗಣೇಶ್ ಬಾಗ್ (ನೆಹರುನಗರ, ಪುತ್ತೂರು), ದೀಕ್ಷಾ ಮೇಡಂ (ಮಂಗಳೂರು), ವಿದ್ಯಾಧರ ಸರ್, ಕುಟುಂಬಸ್ಥರು ಹಾಗೂ ಬಂಧು-ಬಳಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಲಾವಿದ ಕೃಷ್ಣಪ್ಪ ನಿರೂಪಿಸಿದರು. ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ನ ಸಮಾಜಸೇವಕ ನವೀನ್ ಸಿಟಿಗುಡ್ಡೆ ವಂದಿಸಿದರು.


