ಮಾಣಿ:ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಮಾಣಿ–ಬೊಳ್ಳುಕಲ್ಲು ಮಾರ್ಗದಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಸಂಪರ್ಕಿಸುವ ಕಮಲ ರಸ್ತೆಯ ಶ್ರೀದೇವಿ ಭಜನಾ ಮಂದಿರದ ಸಮೀಪ ಬೃಹತ್ ಮರವೊಂದು ವಿದ್ಯುತ್ ಟ್ರಾನ್ಸ್ಫಾರ್ಮರ್ ಕಂಬದ ಮೇಲೆ ಉರುಳಿಬಿದ್ದಿದೆ.

ಘಟನೆಯ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿ, ಮರದೊಂದಿಗೆ ರಸ್ತೆಗೆ ಬಿದ್ದ ಕಾರಣ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ರಾತ್ರಿ ವೇಳೆ ಶ್ರೀ ರಾಮಚಂದ್ರಾಪುರ ಮಠದ ಕಾರ್ಯದರ್ಶಿ ಶಿವಪ್ರಸಾದ್ ಅವರ ನೇತೃತ್ವದಲ್ಲಿ ಸ್ಥಳೀಯರು ಮರವನ್ನು ಕಡಿದು ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಆದರೆ, ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪೆರಾಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ನಿವಾಸಿಗಳು ಕತ್ತಲೆಯಲ್ಲೇ ರಾತ್ರಿ ಕಳೆಯುವಂತಾಯಿತು. ವಿದ್ಯುತ್ ಇಲಾಖೆ ದುರಸ್ತಿ ಕಾರ್ಯ ಕೈಗೊಂಡ ಬಳಿಕ ವಿದ್ಯುತ್ ಪೂರೈಕೆ ಪುನಃ ಆರಂಭವಾಗುವ ನಿರೀಕ್ಷೆಯಿದೆ.


