Breaking
26 Jun 2026, Fri

ಬೆಂಗಳೂರು: ದರ್ಶನ್ ಪುತ್ರ ವಿನೀಶ್ ಇದ್ದ ಕಾರು ಅಪಘಾತ – ಸ್ಕೂಟರ್ ಸವಾರ ಗಾಯ

ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ಗುರುವಾರ ನಡೆದ ರಸ್ತೆ ಅಪಘಾತವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ನಟ ದರ್ಶನ್ ಅವರ ಪುತ್ರ ವಿನೀಶ್ ಇದ್ದರು ಎಂದು ಹೇಳಲಾದ ಫೋರ್ಡ್ ಎಂಡೋವರ್ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂಬ ಮಾಹಿತಿ ಹೊರಬಿದ್ದಿದೆ.


ಮಾಹಿತಿಯ ಪ್ರಕಾರ, ಆರ್.ಆರ್.ನಗರ ರಸ್ತೆಯಲ್ಲಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂಭಾಗದಲ್ಲಿ ತೆರಳುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.


ಘಟನೆ ಬಳಿಕ ಸ್ಥಳೀಯರು ವಾಹನವನ್ನು ತಡೆದು ನಿಲ್ಲಿಸಿದ್ದು, ಕಾರಿನಿಂದ ಇಳಿದ ವಿನೀಶ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿರುವುದಾಗಿ ಹೇಳಲಾಗಿದೆ. ಸ್ಥಳದಲ್ಲಿದ್ದವರು ಅತೀವೇಗ ಮತ್ತು ಅಜಾಗರೂಕ ಚಾಲನೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಅಪಘಾತದ ವೇಳೆ ವಿನೀಶ್ ವಾಹನ ಚಾಲನೆ ಮಾಡುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಬೈಕ್ ಸವಾರನಿಗೆ ಸಹಾಯ ಮಾಡುವ ಕೆಲಸದಲ್ಲಿ ವಿನೀಶ್ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *