ಕಲಬುರಗಿ: ಕೆ.ಕೆ.ಆರ್.ಟಿ.ಸಿ ಸರಕಾರಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಢಿಕ್ಕಿಯಲ್ಲಿ ಬೈಕ್ ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಕರದಾಳ ಸಮೀಪ ಗುರುವಾರ (ಜೂ.25) ಬೆಳಗಿನ ಜಾವ ನಡೆದಿದೆ.

ಮೃತರನ್ನು ಬಮ್ಮನಳ್ಳಿ ಗ್ರಾಮದ ದೇವರಾಜ ಅಯ್ಯಪ್ಪ (19), ಮುಡಬೂಳ ಗ್ರಾಮದ ಲಕ್ಷ್ಮೀಕಾಂತ (24), ಹಾಗೂ ಸೇಡಂ ತಾಲೂಕಿನ ಬೀಜನಳ್ಳಿ ಗ್ರಾಮದ ಪ್ರಕಾಶ ಬಸ್ಸಪ್ಪ (22) ಎಂದು ಗುರುತಿಸಲಾಗಿದೆ.

ಚಿತ್ತಾಪುರದಿಂದ ಸನ್ನತಿ ಕಡೆಗೆ ತೆರಳುತ್ತಿದ್ದ ಕೆ.ಕೆ.ಆರ್.ಟಿ.ಸಿ ಬಸ್ ಮತ್ತು ಬಮ್ಮನಳ್ಳಿ ಕಡೆಯಿಂದ ಸೇಡಂ ತಾಲೂಕಿನ ಬೀಜನಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಎಸ್.ಸಿ. ಪಾಟೀಲ್, ಪಿಎಸ್ಐ ಮಂಜುನಾಥ ರೆಡ್ಡಿ ಸಿಬ್ಬಂದಿಗಳಾದ ದತ್ತು, ಅಯ್ಯಣ್ಣ ಅಝರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


