Breaking
9 May 2026, Sat

ಹಿರಿಯ ಪತ್ರಕರ್ತರಾದ ಹರೀಶ್ ಮಾಂಬಾಡಿ, ಸತೀಶ್ ಇರಾ ಸೇರಿದಂತೆ 18 ಮಂದಿಗೆ ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಕೆಯುಡಬ್ಲುಜೆ ದತ್ತಿನಿಧಿ ಪ್ರಶಸ್ತಿ ಘೋಷಣೆ

ಮಂಗಳೂರು: ಹಿರಿಯ ಪತ್ರಕರ್ತರಾದ ಹರೀಶ್ ಮಾಂಬಾಡಿ, ಸತೀಶ್ ಇರಾ, ಬಿ.ಎಂ.ಹನೀಫ್, ವಾಸುದೇವ ಹೊಳ್ಳ ಸೇರಿದಂತೆ ದಕ್ಷಿಣ ಕನ್ನಡ, ಕಾಸರಗೋಡು, ಹಾಗೂ ರಾಜ್ಯದ ವಿವಿಧ ಭಾಗಗಳ 18 ಮಂದಿಗೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಸಹಯೋಗದೊಂದಿಗೆ ನೀಡುವ ದತ್ತಿನಿಧಿ ಪ್ರಶಸ್ತಿಯನ್ನು ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಮತ್ತು ಕೆಯುಡಬ್ಲ್ಯುಜೆ ಕಾಸರಗೋಡು ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಘೋಷಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಮೇ 16ರಂದು ಬೆಳಗ್ಗೆ 9 ರಿಂದ ಕಾಸರಗೋಡು ಕುಡಾಲ್ ಮೇರ್ಕಳ ಸುಬ್ಬಯ್ಯ ಕಟ್ಟೆ ಅನುದಾನಿತ ಕಿ.ಪ್ರಾ. ಶಾಲಾ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಕರ್ನಾಟಕದ ಸಚಿವ ಬೋಸರಾಜು ಮತ್ತು ಮಂಜೇಶ್ವರ ಶಾಸಕ ಅಶ್ರಫ್ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡುವರು. ಬೆಳಗ್ಗೆ 9 ಗಂಟೆಗೆ ಪೈವಳಿಕೆ ಗ್ರಾಪಂ ಅಧ್ಯಕ್ಷೆ ಬದರುನ್ನೀಸ ಸಲೀಂ ಮತ್ತು ಹಿರಿಯ ಸಮಾಜ ಸೇವಕ ಭಂಡಾರಗುತ್ತು ಸೀತಾರಾಮ ಶೆಟ್ಟಿ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. 11 ಗಂಟೆಗೆ ಸಭಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು.

ವಿಧಾನಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡುವರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನ ಮರದ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ದತ್ತಿನಿಧಿ ಪ್ರಶಸ್ತಿ ಪುರಸ್ಕೃತರು ಹಿರಿಯ ಪತ್ರಕರ್ತರಾದ ಬಿ.ಎಂ.ಹನೀಫ್, ಕುರಿಯ ವಾಸುದೇವ ಎಂ.ಹೊಳ್ಳ, ಡಾ.ಯು.ಎಂ.ರವಿ, ವಿಜಯಲಕ್ಷ್ಮೀ ಶಿಬರೂರು, ಎಚ್.ಇ.ರವಿ ಸೋಮವಾರಪೇಟೆ, ವಿಶ್ವನಾಥ ಬೆಳಗಲ್ ಮಠ ಕೊಪ್ಪಳ, ಪ್ರಕಾಶ್ ಸುವರ್ಣ ಕಟಪಾಡಿ, ದೇವೇಂದ್ರಪ್ಪ ಆವಂಟಿ ಗುಲ್ಬರ್ಗ, ಸತೀಶ್ ಇರಾ, ಸುಭಾಷ್ ಸಿರಿಯ, ಹರೀಶ್ ಮಾಂಬಾಡಿ, ನವೀನ್ ಡಿಸೋಜ ಕೊಡಗು, ಸಂಶುದ್ದೀನ್ ಎಣ್ಮೂರು, ಎ.ಆರ್.ಚಿದಂಬರ ಕೊರಟಗೆರೆ, ತುಮಕೂರು, ಕೆ.ಆರ್.ಮಂಜುನಾಥ ಹಾಸನ, ತೆಕ್ಕೆಕೆರೆ ಶಂಕರನಾರಾಯಣ ಭಟ್ಟ, ಸುಬ್ಬಣ್ಣ ಶೆಟ್ಟಿ ಕುಚಿಕ್ಕಾಡ್ ಅವರಿಗೆ ವಿವಿಧ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುದು ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಸಂಸ್ಥಾಪಕ ಪ್ರದೀಪ ಕುಮಾರ ಕಲ್ಕೂರ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಅಶೋಕ ಭಂಡಾರಿ ಕುಡಾಲ್, ಸಂಚಾಲಕ ರಾಘವ ಚೇರಾಲ್ ಉಪಸ್ಥಿತರಿದ್ದರು.

ಹರೀಶ ಮಾಂಬಾಡಿ ಕಳೆದ 27 ವರ್ಷಗಳಿಂದ ರಾಜ್ಯದ ಪ್ರಮುಖ ದೈನಿಕ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಹಲವು ಜವಾಬ್ದಾರಿಯುತ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ಹರೀಶ ಮಾಂಬಾಡಿ ಅವರು ಪ್ರಸ್ತುತ ಬಂಟ್ವಾಳದಲ್ಲಿ ವಾಸವಾಗಿದ್ದು, ಡಿಜಿಟಲ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದಾರೆ.
ಕನ್ನಡದ ಒಟ್ಟು ಐದು ಪ್ರಮುಖ ದೈನಿಕ, ಒಂದು ವಾರಪತ್ರಿಕೆ, ಎರಡು ಡಿಜಿಟಲ್ ಪತ್ರಿಕೆ ಯಲ್ಲಿ ವರದಿಗಾರ, ಉಪಸಂಪಾದಕ, ಹಿರಿಯ ಉಪಸಂಪಾದಕ, ಮುಖ್ಯ ಉಪಸಂಪಾದಕ ಹೀಗೆ ವಿವಿಧ ಸ್ತರದ ಹುದ್ದೆಗಳಲ್ಲಿ ಸುದೀರ್ಘ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Leave a Reply

Your email address will not be published. Required fields are marked *