ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಗೆ ಕುಖ್ಯಾತಿಯಾದ ಊರು. ಇಲ್ಲಿ ಸೋಮವಾರ ಸಂತೆಯ ದಿನ. ಸಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಡೆಯುತ್ತಿರುವ ಕಾರಣ ಸೋಮವಾರ ಇನ್ನೂ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತಿದೆ. ಆದರೂ ಸಂತೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಯಾವುದೇ ಕಾರ್ಯ ನಡೆಯುತ್ತಿಲ್ಲ ಎಂಬುದೇ ಆಶ್ಚರ್ಯಕರವಾಗಿದೆ.

ಬೆಳ್ತಂಗಡಿ ಸಂತೆಗೆ ಹಲವು ದಶಕಗಳ ಇತಿಹಾಸವಿದೆ. ಈ ಹಿಂದೆ ವಾಹನಗಳ ಸಂಖ್ಯೆ ಕಡಿಮೆಯಾಗಿದ್ದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಈಗ ವಾಹನಗಳ ಸಂಖ್ಯೆ ಹೆಚ್ಚಿರುವ ಕಾರಣ ವಾರದ ಸಂತೆ ಜನತೆಗೆ ಖುಷಿ ಕೊಡುವ ಬದಲಾಗಿ ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲೆ ಸಂತೆ: ಬಿ.ಸಿ ರೋಡ್- ಕಡೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಬೆಳ್ತಂಗಡಿಯ ವಾರದ ಸಂತೆ ಸಂತೆಕಟ್ಟೆ ಪ್ರದೇಶದಲ್ಲಿ ನಡೆಯುತ್ತದೆ. ಸೋಮವಾರ ಒಂದು ದಿನಕ್ಕೆ ಸೀಮಿತವಾಗಿರುವ ಈ ಸಂತೆಯಲ್ಲಿ ತಾಲೂಕಿನ ಗ್ರಾಮೀಣ ಪ್ರದೇಶದ ರೈತರು ಸೇರಿದಂತೆ ವಿವಿಧ ಜಿಲ್ಲೆಯ ರೈತರು ತರಕಾರಿ , ಸೇರಿದಂತೆ ನಿತ್ಯೋಪಯೋಗಿ ವಸ್ತುಗಳು , ಹಣ್ಣುಹಂಪಲುಗಳನ್ನು ರಸ್ತೆ ಬದಿಯಲ್ಲೇ ಮಾರಾಟ ಮಾಡುತ್ತಾರೆ. ಸಂತೆ ಏಲಂ ಪಡೆದುಕೊಂಡವರು ಪರ್ಯಾಯ ವ್ಯವಸ್ಥೆ ಮಾಡದೇ ಪ್ರತಿ ವಾರ ರೈತರಿಂದ ವಸೂಲಿಗೆ ಮಾತ್ರ ಬರುತ್ತಾರೆ ಎಂಬ ಆರೋಪವಿದೆ.

ಸಂತೆ ಪ್ರಾಂಗಣದಲ್ಲಿ ಸ್ಥಳವಿಲ್ಲ: ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಸಂತೆ ಪ್ರಾಂಗಣವಿದೆ. ಇದು ನಿತ್ಯ ಅಂಗಡಿ ನಡೆಸುವವರು ಏಲಂ ಮೂಲಕ ಪಡೆದುಕೊಂಡು ಅಂಗಡಿ ನಡೆಸುತ್ತಿದ್ದಾರೆ. ಅದು ಬಿಟ್ಟರೆ ವಾರದ ಸಂತೆಯ ದಿನ ನಾಲ್ಕೈದು ಅಂಗಡಿಗಳಿಗೆ ಮಾತ್ರ ಸ್ಥಳಾವಕಾಶ ಇದೆ. ಇದರಿಂದಾಗಿ ಅನಿವಾರ್ಯವಾಗಿ ವಾರದ ಸಂತೆ ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆಯುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತಕನದ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಯು ಭರದಿಂದ ನಡೆಯುತ್ತಿದ್ದು , ಪ್ರಸ್ತುತ ಬೆಳ್ತಂಗಡಿ ಸಂತೆಕಟ್ಟೆ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು , ಇದೇ ಸಮಯದಲ್ಲಿ ವಾರದ ಸಂತೆಯೂ ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆಯುತ್ತಿರುವುದು ಇತ್ತ ಟ್ರಾಫಿಕ್ ಜಾಮ್ ಜೊತೆಗೆ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದೆ.

ವಾರದ ಸಂತೆಗೆ ಪರ್ಯಾಯ ವ್ಯವಸ್ಥೆ ಬೇಕಾಗಿದೆ : ಈ ಹಿಂದೆ 2018 ರಲ್ಲಿ ಅಂದಿನ ತಹಶೀಲ್ದಾರ್ ಆಗಿದ್ದ ಗಣಪತಿ ಶಾಸ್ತ್ರಿ ರವರು ಟ್ರಾಫಿಕ್ ಜಾಮ್ ಆಗುತ್ತಿರುವುದನ್ನು ಮನಗಂಡು ವಾರದ ಸಂತೆಯನ್ನು ವಾಣಿ ಕಾಲೇಜ್ ಸಮೀಪದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಂಡಿತು. ವ್ಯಾಪಾರದ ಕೊರತೆ ಸೇರಿದಂತೆ ಹಲವಾರು ನೆಪ ಹೇಳಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ರವರು ವರ್ಗಾವಣೆಗೊಂಡ ನಂತರ ಏಕಾಏಕಿ ವಾರದ ಸಂತೆ ಮತ್ತೆ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಪ್ರಾರಂಭವಾಯಿತು. ಸಂತೆಕಟ್ಟೆಯ ಸಮೀಪವೇ ಮಾರಿಗುಡಿ ಮೈದಾನವಿದ್ದು ಇಲ್ಲಿಗೆ ವಾರದ ಸಂತೆಯನ್ನು ಸ್ಥಳಾಂತರಗೊಳಿಸಲು ಕ್ರಮ ಕೈಗೊಂಡರೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಾಧ್ಯವಿದೆಯಾದರೂ ಸ್ಥಳಾಂತರಿಸುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ.



