Breaking
24 Apr 2026, Fri

ಬಳಂಜ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿ ವಿಗ್ರಹ ಭಗ್ನಗೊಳಿಸಿದ ದುಷ್ಕರ್ಮಿ

ಬೆಳ್ತಂಗಡಿ: ಬಳಂಜ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ನುಗ್ಗಿದ ದುಷ್ಕರ್ಮಿ ದೇವರ ವಿಗ್ರಹಕ್ಕೆ ಹಾನಿ ಉಂಟುಮಾಡಿದ ಘಟನೆ ನಡೆದಿದೆ.

ದುಷ್ಕರ್ಮಿಯನ್ನು ವ್ಯಕ್ತಿಯನ್ನು ಅಜಯ್ ಎಂದು ಗುರುತಿಸಲಾಗಿದೆ.

ಏ. 22ರಂದು ಅಜಯ್ ಥಾರ್ ಕಾರಿನಲ್ಲಿ ದೇವಸ್ಥಾನದ ಸಮೀಪಕ್ಕೆ ಬಂದು, ಹತ್ತಿರದಲ್ಲಿರುವ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ‘ಎನ್ನನ್ ಬಚಾವ್ ಮಲ್ಪಿ’ ಎಂದು ಕೂಗುತ್ತಾ ಒಳಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಇದಕ್ಕೆ ಮನೆಯವರು ಗದರಿಸಿ ಆತನನ್ನು ಅಲ್ಲಿಂದ ಕಳುಹಿಸಿದ್ದಾರೆ.

ಬಳಿಕ ಆತ ದೇವಸ್ಥಾನದ ಪವಿತ್ರ ಜಳಕದ ಕೆರೆಗೆ ಹಾರಿ, ಅಲ್ಲಿಂದ ದೇವಸ್ಥಾನಕ್ಕೆ ತೆರಳಿ ಪಿಲ್ಲರ್ ಸಹಾಯದಿಂದ ಮೇಲ್ಛಾವಣಿಗೆ ಏರಿ, ಹಂಚುಗಳನ್ನು ತೆಗೆದು ಒಳನುಗ್ಗಿದ್ದಾನೆ.
ಅದರ ನಂತರ ಕೊಡಮಣಿತ್ತಾಯ ದೈವದ ಸನ್ನಿಧಿಗೆ ಇಳಿದು ಪೀಠದ ಮೇಲಿದ್ದ ಗಂಟೆಯನ್ನು ತೆಗೆದು ಹಂಚಿನ ಬಳಿ ಇಟ್ಟು ಅಪವಿತ್ರಗೊಳಿಸಿದ್ದಾನೆ. ಅಲ್ಲದೆ ತೀರ್ಥ ಮಂಟಪದ ಬಳಿ ಇದ್ದ ದೊಡ್ಡ ಗಂಟೆಯನ್ನು ಬಾರಿಸಿ, ಶ್ರೀ ಗೋಪಾಲಕೃಷ್ಣ ದೇವರ ಗರ್ಭಗುಡಿಗೆ ಪ್ರವೇಶಿಸಿದ್ದಾನೆ.

ಅಲ್ಲಿ ಪೂಜಿಸಲ್ಪಡುತ್ತಿದ್ದ ವಿಗ್ರಹವನ್ನು ಹೊರತೆಗೆದು ನೆಲಕ್ಕೆ ಎಸೆದು ಹಾನಿಗೊಳಿಸಿದ್ದು, ಗರ್ಭಗುಡಿಯಲ್ಲಿದ್ದ ಪೂಜಾ ಪರಿಕರಗಳನ್ನು ಎಲ್ಲೆಂದರಲ್ಲಿ ಎಸೆದು ಅಸ್ತವ್ಯಸ್ತಗೊಳಿಸಿದ್ದಾನೆ.

ಘಟನಾ ಸ್ಥಳಕ್ಕೆ ಧಾವಿಸಿದ ವೇಣೂರು ಪೊಲೀಸರು ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *