ಕಲ್ಲಡ್ಕ : ಗೋಳ್ತಮಜಲು ಗ್ರಾಮ ಪಂಚಾಯತ್, ಹಸಿರು ದಳ ಮಂಗಳೂರು, ಆಶೀರ್ವಾದ ಸಂಜೀವಿನಿ ಒಕ್ಕೂಟ ಗೋಳ್ತಮಜಲು ಹಾಗೂ ಶ್ರೀ ಸಿದ್ಧಿವಿನಾಯಕ ಸ್ವಸಹಾಯ ಸಂಘ ಇವುಗಳ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರ ಋತುಚಕ್ರ ನಿರ್ವಹಣಾ, ಹಾಗೂ ಮಹಿಳೆ ಮತ್ತು ಶುಚಿತ್ವ ಮಾಹಿತಿ ಕಾರ್ಯಕ್ರಮವು ಮಾ.12 ಗುರುವಾರ ಗೋಳ್ತಮಜಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ವಿದ್ಯಾ ಕೊಟ್ಟಾರಿ ವಹಿಸಿದ್ದರು.

ಗೋಳ್ತಮಜಲು ಗ್ರಾಮ ಪಂಚಾಯತ್ನ ಆಡಳಿತಾಧಿಕಾರಿ ಬಂಟ್ವಾಳ ಕೃಷಿ ಅಧಿಕಾರಿ ನಂದನ್ ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಿಳೆಯರ ಸಬಲೀಕರಣ ಹಾಗೂ ಉತ್ತಮ ಸ್ಥಾನಮಾನ ಗಳಿಸುವ ಮಹತ್ವದ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬ್ಯಾಂಕ್ ಆಫ್ ಬರೋಡಾ ಕಲ್ಲಡ್ಕ ಶಾಖ ವ್ಯವಸ್ಥಾಪಕ ಭುವನೇಶ್ ಬ್ಯಾಂಕ್ ಸಾಲ ಸೌಲಭ್ಯಗಳು ಹಾಗೂ ವಿಮೆಗಳ ಕುರಿತು ಮಾಹಿತಿ ನೀಡಿ, ಪ್ರತಿಯೊಬ್ಬರೂ ವಿಮೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು. ಹಸಿರು ದಳ ಪಾವೂರು ವಲಯ ಮೇಲ್ವಿಚಾರಕರಾದ ಪ್ರಿಯಾ ಹಾಗೂ ಹರೇಕಲ ವಲಯ ಮೇಲ್ವಿಚಾರಕರಾದ ರೇಖಾರವರು ಋತುಚಕ್ರದ ಸಮಯದಲ್ಲಿ ಮಹಿಳೆಯರು ವಹಿಸಬೇಕಾದ ಕಾಳಜಿಗಳ ಕುರಿತು ಮಾಹಿತಿಯನ್ನು ನೀಡಿದರು.

ಕಲ್ಲಡ್ಕ ಮಾದರಿ ಶಾಲಾ 8ನೇ ತರಗತಿ ವಿದ್ಯಾರ್ಥಿಗಳಿಗೆ ಋತುಚಕ್ರ ಹಾಗೂ ಶುಚಿತ್ವದ ಬಗ್ಗೆ ಅರಿವು ಮೂಡಿಸಿ ಉಚಿತವಾಗಿ ಕಾಟನ್ ಪ್ಯಾಡ್ಗಳನ್ನು ವಿತರಿಸಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಯಾದ ಚಂದ್ರಾವತಿರವರು ಮಹಿಳೆಯರು ಮತ್ತು ಹದಿಹರೆಯದ ಮಕ್ಕಳು ಪಾಲಿಸಬೇಕಾದ ಆರೋಗ್ಯ ಹಾಗೂ ಶುಚಿತ್ವದ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಮಹಿಳಾ ದಿನಾಚರಣೆಯ ಅಂಗವಾಗಿ ಒಳಾಂಗಣ ಆಟಗಳನ್ನು ಆಯೋಜಿಸಿ ಮಹಿಳೆಯರನ್ನು ಮನರಂಜಿಸಲಾಯಿತು. ಉತ್ತಮವಾಗಿ ಆಟವಾಡಿದ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಸಿರು ದಳ ಗೋಳ್ತಮಜಲು ವಲಯ ಮೇಲ್ವಿಚಾರಕರಾದ ಸಾಂತಪ್ಪ, ಪಂಚಾಯತ್ ಕಾರ್ಯದರ್ಶಿ ಚಿತ್ರ, ಬಂಟ್ವಾಳ ಸಂಜೀವಿನಿ ಅಭಿಯಾನ ಘಟಕದ ಕೃಷಿ ವ್ಯವಸ್ಥಾಪಕರಾದ ಕುಮಾರಿ ಸಾಂಘವಿ, ಆರ್ಥಿಕ ಸಾಕ್ಷರತಾ ಕೇಂದ್ರ ಬಿ.ಸಿ.ರೋಡು ಇದರ ಸಂಪನ್ಮೂಲ ವ್ಯಕ್ತಿ ಅನುಷಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯ ಪ್ರಕಾಶ್ ಪ್ರಾರ್ಥಿಸಿ,ಮುಖ್ಯ ಪುಸ್ತಕ ಬರಹಗಾರರಾದ ಭವಾನಿ ಸ್ವಾಗತಿಸಿ, ಕೃಷಿ ಸಖಿ ಪುಷ್ಪಾವತಿ ಪಿ. ಕಾರ್ಯಕ್ರಮ ನಿರೂಪಿಸಿದರು.



