ಬಂಟ್ವಾಳ: ಶ್ರೀ ನಡಿಯೇಳು ದೈವಂಗಳು, ಶ್ರೀ ಉಳ್ಳಾಲ್ತಿ ಶ್ರೀ ನಾಲ್ಕೈತಾಯ ಹಾಗೂ ಪರಿವಾರ ದೈವಗಳು ಇರುವ ಶ್ರೀ ಕ್ಷೇತ್ರ ಮಿತ್ತಮಜಲು ಸಜೀಪ ಮಾಗಣೆ ಶ್ರೀ ಕ್ಷೇತ್ರದಲ್ಲಿ ಶ್ರೀ ದೈವಂಗಳ ನೂತನ ಸ್ವರ್ಣಬಿಂಬ ಪ್ರತಿಷ್ಠಾಪನ ಅಂಗವಾಗಿ ಮಾ. 18 ರಿಂದ 20 ರವರೆಗೆ ಮೂರು ದಿನಗಳ ಬ್ರಹ್ಮಕಲಶೋತ್ಸವ ಬ್ರಹ್ಮ ಶ್ರೀ ನಿಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ವಿದ್ಯುಕ್ತವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಅನ್ನದಾನದೊಂದಿಗೆ ಜರುಗಲಿದೆ.

ಈ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯು ಮಿತ್ತ ಮಜಲು ಕ್ಷೇತ್ರದಲ್ಲಿ ಫೆ. 27 ರಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರೀಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮೂರು ದಿನಗಳ ಕಾರ್ಯಕ್ರಮವು ಈ ಹಿಂದಿನ ಬ್ರಹ್ಮಕಲಶದ ಸಂದರ್ಭದಲ್ಲಿ ಜರಗಿದಂತಹ ಕಾರ್ಯಕ್ರಮಕ್ಕೂ ಮಿಗಿಲಾಗಿ ಮಾಗಣೆಯ ಹಾಗೂ ಊರ ಪರ ಊರ ಭಕ್ತಾಭಿಮಾನಿಗಳ ಸಂಘ ಸಂಸ್ಥೆಗಳ ಪೂರ್ಣ ಸಹಕಾರದೊಂದಿಗೆ ಯಶಸ್ವಿಯಾಗಿಸುವಲ್ಲಿ ಎಲ್ಲರ ಸಹಕಾರವನ್ನು ಯಾಚಿಸಿದರು.

ದೈವರಾದನೆಯಲ್ಲಿ ಸಜೀಪ ಮಾಗಣೆ ಬಹಳ ಹಿಂದಿನಿಂದಲೂ ಉನ್ನತ ಸ್ಥಾನದಲ್ಲಿದ್ದು ಆ ಪರಂಪರೆಯನ್ನು ನಾವೆಲ್ಲರೂ ಮುಂದುವರಿಸಿ ಶ್ರೀ ದೈವಂಗಳ ಸಿರಿಮುಡಿಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೈವಂಗಳ ಕೃಪೆಗೆ ಪಾತ್ರರಾಗುವಂತೆ ವಿನಂತಿಸಿದರು.

ಅಂದಾಜು 160 ಪವನ್ ಚಿನ್ನದೊಂದಿಗೆ ಶ್ರೀ ದೈವಂಗಳ ನೂತನ ಸ್ವರ್ಣ ಬಿಂಬ, ಬಿಲ್ಲು ಬಾಣ, ಆಯುಧ, ಪಲ್ಲಕ್ಕಿ ನವೀಕರಣಗೊಳ್ಳುತ್ತಿದ್ದು ಶ್ರೀ ಉಳ್ಳಾಲ್ತಿ ದೈವದ ಚಿನ್ನಾಭರಣ ಸಂಗ್ರಹದ ರಜತ ಕರಜನೆಗೆ ಸ್ವರ್ಣ ಮುಕುಟ ಕೆಲಸ ಪ್ರಗತಿಯಲ್ಲಿದ್ದು ಮಾ. 18ರಂದು ವಾದ್ಯ ಘೋಷ ಬಿರುದಾವಲಿಗಳೊಂದಿಗೆ ಅತ್ಯಾಕರ್ಷಕ ಮೆರವಣಿಗೆಯಲ್ಲಿ ಮಾರ್ನಬೈಲ್ ಜಂಕ್ಷನ್ ನಿಂದ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆ ಕಾಣಿಕೆ ಕುಣಿತ ಭಜನೆಯೊಂದಿಗೆ ಭವ್ಯ ಮೆರವಣಿಗೆ ಕ್ಷೇತ್ರಕ್ಕೆ ತಲುಪಲಿದೆ ಎಂದು ತಿಳಿಸಿದರು.

ಈ ವೇಳೆ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಮಾತನಾಡಿ ಜೀವಮಾನದಲ್ಲಿ ಅಪರೂಪಕ್ಕೊಮ್ಮೆ ಸಿಗುವ ಇಂತಹ ಪುಣ್ಯ ಕಾರ್ಯಕ್ರಮಗಳಲ್ಲಿ ಎಲ್ಲರೂ ತನು ಮನ ಧನಗಳನ್ನು ಅರ್ಪಿಸಿ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಸಾಕ್ಷಿಗಳಾಗಿ ಭಾಗವಹಿಸಿ ಕ್ಷೇತ್ರದ ಪಾವಿತ್ರ್ಯತೆ ಹಾಗೂ ಕೀರ್ತಿಯನ್ನು ಹೆಚ್ಚಿಸಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಗಡಿ ಪ್ರಧಾನರಾದ ಸಜೀಪ ಗುತ್ತು ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಡದಾರು ಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ ಹಾಗೂ ಗುತ್ತು ಮನೆತನದ ಪ್ರತಿನಿಧಿಗಳು ಚಾಕರಿ ವರ್ಗದವರು ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.




