ಬೆಂಗಳೂರು: ಸೀರಿಯಲ್ ಮತ್ತು ಸಿನಿಮಾ ಎರಡರಲ್ಲೂ ಸಕ್ರೀಯರಾಗಿರುವ ಮಂಗಳೂರು ಮೂಲದ ಬೆಡಗಿ, ನಟಿ ಮೌನ ಗುಡ್ಡೆಮನೆ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರಾವಾಹಿಯ ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ “ಕೃಷ್ಣ ರುಕ್ಕು” ಧಾರಾವಾಹಿಗೆ ನಾಯಕಿ ನಟಿಯಾಗಿ ಆಯ್ಕೆಯಾಗಿದ್ದು ಇದರ ಪ್ರೋಮೋವನ್ನು ಚಾನೆಲ್ ರಿಲೀಸ್ ಮಾಡಿದೆ.

ಈ ಧಾರಾವಾಹಿಯಲ್ಲಿ ರುಕ್ಕು ಪಾತ್ರಕ್ಕೆ ಮೌನ ಗುಡ್ಡೆಮನೆ ಅವರು ಜೀವ ತುಂಬುತ್ತಿದ್ದು ಎಂತಹುದೇ ಕಷ್ಟ ಬಂದರೂ ಅದರಲ್ಲಿ ನಗು ಕಾಣೋದು ರುಕ್ಕು ಪಾತ್ರದ ಸ್ವಭಾವ ಅಂತ ಹೇಳಲಾಗುತ್ತಿದೆ. ಇತ್ತ ಬೆಳ್ಳಿ ತೆರೆಯಲ್ಲೂ ಸಕ್ರೀಯರಾಗಿರುವ ಮೌನ ಅವರು 2025ರಲ್ಲಿ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಮೂಲಕ ಸಿನಿರಂಗಕ್ಕೂ ಎಂಟ್ರಿ ಕೊಟ್ಟು ಸಕಸ್ಸ್ ಕೂಡ ಕಂಡಿದ್ದಾರೆ. ಮುಂದೆ ಕೃಷ್ಣ ರುಕ್ಕು ಧಾರಾವಾಹಿಯ ಈ ರುಕ್ಕು ಪಾತ್ರ ವೀಕ್ಷಕರಿಗೆ ಹೇಗೆ ಇಷ್ಟವಾಗಲಿದೆ ಅನ್ನುವುದನ್ನು ನಾವು ಕಾದು ನೋಡಬೇಕಿದೆ. ನಾಯಕ ನಟ ಕೃಷ್ಣನ ಪಾತ್ರದಲ್ಲಿ ಅಕ್ಷಯ್ ನಾಯಕ್ ನಟಿಸಿದ್ದು ಬಹುದೊಡ್ಡ ಅನುಭವಿ ಕಲಾವಿದರ ದಂಡೇ ಇದರಲ್ಲಿ ಇದೆ.

ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಚಾರಿ ಧಾರಾವಾಹಿಯಲ್ಲಿ ಮೌನ ಅವರು ಚಾರುವಾಗಿ ಮತ್ತು ರಾಮಾಚಾರಿಯಾಗಿ ರಿತ್ವಿಕ್ ಕೃಪಾಕರ್ ಅವರು ನಟಿಸಿದ್ದರು. ಕೆ.ಎಸ್. ರಾಮ್ಜಿ ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು.







