ಉಡುಪಿ : ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಹೇಳಿ 5 ಲಕ್ಷ ರೂಪಾಯಿ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ಜಯಪ್ರಕಾಶ್ ಡಿ ಎಂದು ಗುರುತಿಸಲಾಗಿದೆ.

ಆರೋಪಿ ಜಯಪ್ರಕಾಶ್ ರಾಯಚೂರಿನ ಚಂದ್ರಬಂಡ ಗಣಮೂರು ನಿವಾಸಿ ಗೋಪಾಲ ಎಂಬವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಹೇಳಿ ಗೋಪಾಲರವರಿಗೆ 150 ಗ್ರಾಂ ಚಿನ್ನಕ್ಕೆ 5 ಲಕ್ಷ ಪಡೆದುಕೊಂಡು ನಕಲಿ ಚಿನ್ನ ನೀಡಿ ಪರಾರಿಯಾಗಿದ್ದರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ತನಿಖೆ ಕೈಗೊಂಡ ಪೊಲೀಸರು ಆರೋಪಿ ಜಯಪ್ರಕಾಶನನ್ನು ಚಿತ್ರದುರ್ಗದ ಕೋಟೆ ಪ್ರದೇಶದಲ್ಲಿ ಬಂಧಿಸಿ ಆತನಿಂದ 4,50,000 ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 10,00,000 ರೂ ಮೌಲ್ಯದ ಕಾರು ಸಹಿತ ಒಟ್ಟು 14,50,000 ರೂಪಾಯಿ ಬೆಲೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.




