ಉಳ್ಳಾಲ: ಕುಂಪಲ ಬೈಪಾಸ್ ಬಳಿ ರಸ್ತೆ ಬದಿಯ ಅಂಗಡಿಯ ಎದುರುಗಡೆ ಮಲಗಿದ್ದ ವ್ಯಕ್ತಿಯೋರ್ವ ಮೇಲೆ ನಾಯಿ ದಾಳಿ ನಡೆಸಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನ.14 ರಂದು ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಕುಂಪಲ ನಿವಾಸಿ ದಯಾನಂದ (60 ವ) ಎಂದು ಗುರುತಿಸಲಾಗಿದೆ.

ನ.13 ರಂದು ದಯಾನಂದ ಅವರು ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್ ಬಳಿ ಇರುವ ಅಂಗಡಿಯ ಎದುರು ಮದ್ಯಪಾನ ಸೇವಿಸಿ ಮಲಗಿದ್ದರು. ಮುಂಜಾನೆ ವೇಳೆ ಇವರ ಮೇಲೆ ನಾಯಿ ದಾಳಿ ಮಾಡಿದೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ರಸ್ತೆಯ ಮತ್ತೊಂದೆಡೆಯ ಮನೆಯತ್ತ ಓಡಿದರೂ ಅಲ್ಲಿಯೂ ನಾಯಿ ಹಿಂಬಾಲಿಸಿ ಮತ್ತೆ ದಾಳಿ ನಡೆಸಿ ದಯಾನಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಸ್ತೆ ಬದಿ ಮೃತದೇಹ ಕಂಡ ಸ್ಥಳೀಯರು ಇದೊಂದು ಕೊಲೆ ಎಂದೇ ಭಾವಿಸಿದ್ದರು. ಬಳಿಕ ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ತಜ್ಞರು ಧಾವಿಸಿ ಇದು ನಾಯಿಯ ದಾಳಿ ಎಂದು ಖಚಿತಪಡಿಸಿದರು. ಸದ್ಯ ನಾಯಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




