ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪ್ರಪಾತಕ್ಕೆ ಬಿದ್ದ ಘಟನೆ ಹಾಸನ ಜಿಲ್ಲೆಯ ಶಿರಾಡಿ ಘಾಟ್ ನ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಗ್ರಾಮದ ಬಳಿ ನಡೆದಿದೆ.

ಕಾರು ರಸ್ತೆಯಿಂದ 80 ಅಡಿ ಆಳಕ್ಕೆ ಕೆಂಪು ಹೊಳೆಗೆ ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದ ಶಿವಮೊಗ್ಗ ಮೂಲದ ಗೋವಿಂದ ನಾಯ್ಕ್ ಎಂಬವರ ಕುಟುಂಬ ಅಪಾಯದಿಂದ ಪಾರಾಗಿದೆ.

ಇವರು ಪುತ್ರನನ್ನು ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿರುವ ನವೋದಯ ಶಾಲೆಗೆ ಬಿಡಲು ಕುಟುಂಬದ ಜೊತೆ ಪ್ರಯಾಣಿಸುತ್ತಿದ್ದಾಗ ಮಾರನಹಳ್ಳಿ ಬಳಿ ತಡೆಗೋಡೆಯಿಲ್ಲದ ಕಾರಣ ನಿಯಂತ್ರಣ ತಪ್ಪಿದ ಕಾರು ಕೆಂಪು ಹೊಳೆಗೆ ಬಿದ್ದಿದೆ.
ಹೊಳೆಗೆ ಕಾರು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದಾರೆ.



