ಬಾಗಲಕೋಟೆ: ಪತಿ ಕಿರುಕುಳದಿಂದ ಬೇಸತ್ತು ಮಗನ ಜೊತೆ ತಾಯಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚೆನ್ನಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ.
ತಾಯಿ ಫಾತಿಮಾ(21) ಮತ್ತು ಪುತ್ರ ಅಬ್ದುಲ್ (3) ಮೃತ ದುರ್ದೈವಿಗಳು.

ಮಗಳ ಸಾವಿಗೆ ಪತಿ ಮಸ್ತಾನ್ ಸಾಬ್ ಕಿರುಕುಳವೇ ಕಾರಣ ಎಂದು ಫಾತಿಮಾ ಪೋಷಕರು ಆರೋಪಿಸಿದ್ದಾರೆ. ಕಳೆದ 8 ವರ್ಷದ ಹಿಂದೆ ಜಮೇಲಾ ಎಂಬ ಯುವತಿಯೊಂದಿಗೆ ಮಸ್ತಾನ್ ಸಾಬ್ ಮದುವೆ ಆಗಿದ್ದ.

5 ತಿಂಗಳ ಗರ್ಭಿಣಿಯಾಗಿದ್ದ ಫಾತಿಮಾಳನ್ನು ಮಸ್ತಾನ್ ಸಾಬ್ ಪ್ರೀತಿಸಿ ಗ್ರಾಮಸ್ಥರ ಸಮ್ಮುಖದಲ್ಲೇ ಮದುವೆ ಆಗಿದ್ದ. ಇತ್ತೀಚೆಗೆ ಫಾತಿಮಾಳಿಗೆ ಕಿರುಕುಳ ನೀಡುತ್ತಿದ್ದ ಆರೋಪ ಕೂಡ ಕೇಳಿಬಂದಿದ್ದು , ಮೂರು ದಿನ ಹಿಂದೆ ಫಾತಿಮಾ ತವರಿಗೆ ಬಂದಿದ್ದಳು. ಮಗಳ ಸಾವಿಗೆ ಪತಿಯ ಕಿರುಕುಳವೇ ಕಾರಣ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೆರೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




