ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಅ.19ರ ಭಾನುವಾರ ಸುರಿದ ಗುಡುಗು ಸಹಿತ ಭಾರೀ ಮಳೆಯಿಂದ ಅನೇಕ ಮನೆಗಳಿಗೆ ಹಾನಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಬಂಟ್ವಾಳ, ಬಿ.ಸಿ. ರೋಡ್, ಬೆಳ್ತಂಗಡಿ, ಮಡಂತ್ಯಾರು, ಉಜಿರೆ, ಧರ್ಮಸ್ಥಳ, ಕನ್ಯಾನ, ವಿಟ್ಲ, ಕಡಬ, ಸುಳ್ಯ, ಸುಬ್ರಹ್ಮಣ್ಯ, ಪಂಜ, ಬೆಳ್ಳಾರೆ, ಪುತ್ತೂರು, ಕಲ್ಲಡ್ಕ, ಉಪ್ಪಿನಂಗಡಿ, ಮೂಡುಬಿದಿರೆ, ಬಜ್ಪೆ, ಸುರತ್ಕಲ್ ನಲ್ಲಿ ವಿಪರೀತ ಮಳೆಯಾಗಿ ರಸ್ತೆಯಲ್ಲಿ ನದಿಯಂತೆ ನೀರು ಹರಿದಿದೆ.

ದೀಪಾವಳಿ ಹಬ್ಬದ ವ್ಯಾಪಾರದ ಮೇಲೂ ಮಳೆ ಪರಿಣಾಮ ಬೀರಿದ್ದು ವ್ಯಾಪಾರ ವಹಿವಾಟಿಗೆ ಅಡಚಣೆ ಉಂಟಾಗಿದೆ.
ಕರಾವಳಿಯಲ್ಲಿ ಮುಂದಿನ ಒಂದು ವಾರದವರೆಗೆ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು ಅ. 20 ರಿಂದ 25 ರವರೆಗೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.



