ಗದಗ: ನವವಿವಾಹಿತೆಯೊಬ್ಬಳು ನೀರಿನ ನೆಲ ಟ್ಯಾಂಕ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಗದದ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಜ್ಜೂರು ಶಿವಾಜಿ ನಗರದಲ್ಲಿ ನಡೆದಿದೆ.

ಪ್ರಿಯಾಂಕಾ ಲಮಾಣಿ (24) ಶವವಾಗಿ ಪತ್ತೆಯಾದ ನವವಿವಾಹಿತೆಯಾಗಿದ್ದಾಳೆ. ಪತಿ ಮಹಾಂತೇಶ್ ಹನುಂಮತಪ್ಪ ಲಮಾಣಿ ಕುಟುಂಬಸ್ಥರು ಕೊಲೆ ಮಾಡಿ ನೀರಿನ ಟ್ಯಾಂಕ್ ನಲ್ಲಿ ಬಿಸಾಕಿರುವುದಾಗಿ ಮೃತ ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಕಳೆದ 5 ತಿಂಗಳ ಹಿಂದೆಯಷ್ಟೇ ಮಹಾಂತೇಶ್ ಎಂಬಾತನ ಜೊತೆ ಪ್ರಿಯಾಂಕಾ ಮದುವೆಯಾಗಿತ್ತು. ಅದೇ ಏರಿಯಾದ ನಾರಾಯಣ ಲಕ್ಷ್ಮಣ ತುಳಸಿಮನಿ ಎಂಬುವರ ಮನೆ ನೀರಿನ ಸಂಪ್ ನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಬೆಳಿಗ್ಗೆ ಮನೆ ಮುಂದಿನ ನೀರಿನ ಸಂಪ್ ಓಪನ್ ಆಗಿರುವುದನ್ನು ನೋಡೊದಾಗಿ ಅಲ್ಲಿ ಯುವತಿ ಶವ ಕಂಡು ಆಶ್ಚರ್ಯವಾಗಿದೆ. ಮೃತ ಮಹಿಳೆಗೆ ನಿತ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಹಬ್ಬಕ್ಕೆ ಊರಿಗೆ ಕಳುಹಿಸಲಿಲ್ಲ. ಹೆಚ್ಚಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಅಂತ ನಿತ್ಯ ಕಿರುಕುಳ ಕೊಡುತ್ತಿರುವುದನ್ನು ಕುಟುಂಬಸ್ಥರಿಗೆ ಹೇಳುತ್ತಿದ್ದಳು ಎಂಬ ಯುವತಿ ಕುಟುಂಬಸ್ಥರ ಆರೋಪಿಸಿದ್ದಾರೆ.

ಆದ್ರೆ ಪತಿ ಕುಟುಂಬಸ್ಥರು ಹೇಳುವ ಪ್ರಕಾರ, ನೀರು ತರಲು ಹೋಗಿ ಕಾಲು ಜಾರಿ ಬಿದ್ದು ಮೃತ ಪಟ್ಟಿರಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತಿ ಮಹಾಂತೇಶ್, ಮಾವ ಹನುಮಂತಪ್ಪ, ಅತ್ತೆ ಹಾಗೂ ಸಹೋದರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಗದಗ ಜಿಲ್ಲೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.



