ಉಡುಪಿ: ಉಡುಪಿಯ ಆರ್ಟಿಒ ಲಕ್ಷ್ಮೀ ನಾರಾಯಣ ಪಿ. ನಾಯಕ ಅವರ ಮನೆ, ಕಚೇರಿ ಸಹಿತ 5 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಮಾಹಿತಿ ಹಾಗೂ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ ಲಕ್ಷ್ಮೀನಾರಾಯಣ ಪಿ. ನಾಯಕ ಅವರು ಉಡುಪಿಯಲ್ಲಿ ಪ್ರಾದೇಶಿಕ ಆರ್ ಟಿಒ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ, ಕಚೇರಿ, ಸಂಬಂಧಿಕರ ಮನೆ ಹಾಗೂ ಆಪ್ತರ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಐದು ತಂಡಗಳಲ್ಲಿ ಶೋಧಕಾರ್ಯ ನಡೆದಿದ್ದು, 2 ಮನೆ, 3 ನಿವೇಶನ, ಚಿನ್ನ, ಬೆಳ್ಳಿ ಗೃಹೋಪಯೋಗಿ ವಸ್ತುಗಳು ,ಬ್ಯಾಂಕ್ ಖಾತೆಗಳ ಒಟ್ಟು ಮೌಲ್ಯ 2,21,14,234 ಗಳಾಗಿದೆ. ಅಸಮಾತೋಲಿತ ಆಸ್ತಿಯು ಶೇ.133.31 ರಷ್ಟಾಗಿದೆ. 1 ಬ್ಯಾಂಕ್ ಲಾಕರ್, ವಿವಿಧ ಆಸ್ತಿ, ವಸ್ತುಗಳ ತನಿಖೆ ಪ್ರಕ್ರಿಯೆ ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸ್ ಪ್ರಕಟನೆ ತಿಳಿಸಿದೆ.

ಲೋಕಾಯುಕ್ತ ಕೇಂದ್ರ ಕಚೇರಿಯ ನಿರ್ದೇಶನದಂತೆ ಕಾರವಾರ ಪ್ರಭಾರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಯಲ್ಲಿ ತನಿಖಾಧಿಕಾರಿ ಮಂಜುನಾಥ, ಅಧಿಕಾರಿಗಳಾದ ಗಾನ ಪಿ. ಕುಮಾರ್, ಧನ್ಯಾ ನಾಯಕ್, ರಾಜೇಂದ್ರ ನಾಯ್ಕ ಚಂದ್ರಶೇಖರ್ ಕೆ.ಎನ್, ಭಾರತಿ, ರವಿ ಎನ್.ಎನ್. ಒಳಗೊಂಡ ತಂಡ ಪಾಲ್ಗೊಂಡಿತ್ತು.




