ಬೆಂಗಳೂರು: ಪದ್ಮಭೂಷಣ ಪುರಸ್ಕೃತ ಹಿರಿಯ ಪತ್ರಕರ್ತ ಹಾಗೂ ಲೇಖಕ ಥೈಲ್ ಜಾಕೋಬ್ ಸೋನಿ ಜಾರ್ಜ್(97) ಅವರು ಅ. 03ರಂದು ಹೃದಯಾಘಾತದಿಂದ ವಿಧಿವಶರಾದರು.
1928ರ ಮೇ 7ರಂದು ಕೇರಳದಲ್ಲಿ ಜನಿಸಿದ ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಪತ್ರಿಕಾ ವೃತ್ತಿಜೀವನವನ್ನು ಮುಂಬೈನ ಫ್ರೀ ಪ್ರೆಸ್ ಜರ್ನಲ್ನಲ್ಲಿ ಆರಂಭಿಸಿದ ಅವರು, ನಂತರ ದೇಶದ ಹಲವಾರು ಪ್ರಮುಖ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ.

ಅವರ ಲೇಖನಶೈಲಿ, ವೈಚಾರಿಕ ಸ್ಪಷ್ಟತೆ, ಮತ್ತು ನಿರ್ಭೀತ ಧ್ವನಿ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದವು. “ಪಾಯಿಂಟ್ ಆಫ್ ವ್ಯೂ” ಎಂಬ ಸಾಪ್ತಾಹಿಕ ಅಂಕಣ 25 ವರ್ಷಗಳ ಕಾಲ ಓದುಗರ ಮನಗೆದ್ದಿತು. ಸಮಾಜದ ಅನ್ಯಾಯ, ಧಾರ್ಮಿಕ ಅಸಹಿಷ್ಣುತೆ, ಭ್ರಷ್ಟಾಚಾರ ಮುಂತಾದ ಸಂಗತಿಗಳ ವಿರುದ್ಧ ಅವರು ತಮ್ಮ ಬರಹದಲ್ಲಿ ಧೈರ್ಯದಿಂದ ಧ್ವನಿ ಎತ್ತಿದ್ದರು.

ಥೈಲ್ ಜಾಕೋಬ್ ಸೋನಿ ಜಾರ್ಜ್ ಅವರು ಕೇವಲ ಪತ್ರಕರ್ತರಲ್ಲ, ಅವರು ಬರಹದ ಮೂಲಕ ಸಮಾಜವನ್ನು ಪ್ರಬೋಧಿಸುವ, ತಾತ್ವಿಕವಾಗಿ ಪ್ರೇರೇಪಿಸುವ ಮಾದರಿ ವ್ಯಕ್ತಿಯಾಗಿದ್ದು, ಏಷ್ಯಾವೀಕ್ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು 2011ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದರು. 2019ರಲ್ಲಿ ಅವರು ಕೇರಳ ಸರ್ಕಾರದಿಂದ ಕೇಸರಿ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

ಹಿರಿಯ ಪತ್ರಕರ್ತರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.



