ಶಿವಮೊಗ್ಗ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ವೃದ್ದೆ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ತಾಲೂಕಿನ ಚಿಪ್ಪಿಗರ ಕೆರೆಯಲ್ಲಿ ನಡೆದಿದೆ.
ತ್ಯಾಗರ್ತಿಯ ಪಾರ್ವತಮ್ಮ(65) ಕೋಂ ಹುಚ್ಚಪ್ಪ ಮೃತಪಟ್ಟ ದುರ್ಧೈವಿಯಾಗಿದ್ದಾರೆ.

ಈ ಸಂದರ್ಭದಲ್ಲಿ ರಸ್ತೆಯಲ್ಲಿ ಹಾದುಹೋಗುತಿದ್ದ ಸಾರ್ವಜನಿಕರು ಕೂಡಲೇ ಸಹಾಯಕ್ಕೆ ತೆರಳಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.
ಆದರೆ ಅಷ್ಟರಲ್ಲಾಗಲೇ ವೃದ್ದೆಯ ಪ್ರಾಣಪಕ್ಶಿ ಹಾರಿಹೋಗಿತ್ತು ಎಂದು ತಿಳಿದು ಬಂದಿದೆ.
ತ್ಯಾಗರ್ತಿಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದು ಹಿಂದಿರುಗುತ್ತಿರುವ ಸಂದರ್ಭದಲ್ಲಿ ಪಟ್ಟಣದ ಚಿಪ್ಪಿಗರ ಕೆರೆ ಏರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಕಾರು ಏಕಾಏಕಿ ಕೆರೆಗೆ ಉರುಳಿಬಿದ್ದಿದೆ ಎನ್ನಲಾಗಿದೆ.

ಕಾರಿನಲ್ಲಿ ಮೂವರು ತೆರಳುತಿದ್ದು ,ಯುವಕ ಹಾಗೂ ಓರ್ವ ಯುವತಿಯನ್ನು ಸ್ಥಳೀಯರು ತಮ್ಮ ಸಮಯ ಪ್ರಜ್ಞೆಯಿಂದ ತಮ್ಮ ಜೀವದ ಹಂಗು ತೊರೆದು ಕಾಪಾಡಿ ತಕ್ಷಣ ಸ್ಥಳಿಯ ಆಸ್ಪತ್ರೆಗೆ ಗಾಯಾಳುಗಳನ್ನು ಕರೆತಂದಿದ್ದಾರೆ.
ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.



