ಚಿಕ್ಕಮಗಳೂರು: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನಲ್ಲಿ ಬಂದ ಕಳ್ಳನೋರ್ವ ಕದಿಯಲು ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಸೆ.16 ರಂದು ನಡೆದಿದೆ.
ಯುವಕ ಹೇಮಂತ್ ಮಹಿಳೆಯ ಚಿನ್ನದ ಸರ ಕದಿಯಲು ಯತ್ನಿಸಿದ ಆರೋಪವನ್ನು ಎದುರಿಸುತ್ತಿದ್ದಾನೆ.

ಶಿಲ್ಪಾ ಎಂಬ ಮಹಿಳೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭ ಬೈಕ್ ನಲ್ಲಿ ಯುವಕ ಮಹಿಳೆಯ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಕಸಿಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಗಾಬರಿಗೊಂಡ ಮಹಿಳೆ ಅಲ್ಲಿದ್ದ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ.

ಇತ್ತ ಸ್ಥಳೀಯರು ಒಟ್ಟಾಗುತ್ತಿದ್ದಂತೆ ಸ್ಥಳದಿಂದ ಯುವಕ ಕಾಲ್ಕಿತ್ತಿದ್ದಾನೆ ಕೂಡಲೇ ಸ್ಥಳೀಯರು ಪಕ್ಕದ ಗ್ರಾಮಕ್ಕೆ ಮಾಹಿತಿ ರವಾನಿಸಿದ್ದಾರೆ ಅದರಂತೆ ಕುರುಕುಬಳ್ಳಿ ಗ್ರಾಮದಲ್ಲಿ ಯುವಕನನ್ನು ಸೆರೆ ಹಿಡಿದಿದ್ದಾರೆ.
ಹರಿಹರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



