ಪುತ್ತೂರು : ಸಹಕಾರಿ ಸಂಘ ಸಂಸ್ಥೆಗಳು ಎಷ್ಟೇ ಬೆಳೆದರೂ ಈ ರೀತಿ ಸಹಾಯಧನ ನೀಡಲು ಯಾರೂ ಬಯಸುವುದಿಲ್ಲ. ಆದರೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಹೆಸರಿಗೆ ಮಾತ್ರ `ಆದರ್ಶ’ ಅಲ್ಲದೆ ಸಹಾಯಧನ ನೀಡಿ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವುದರಲ್ಲೂ ಸಮಾಜಕ್ಕೆ ಆದರ್ಶವಾಗಿದೆ. ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಅವರ ಮನಸ್ಸು ಮತ್ತು ಧ್ಯೇಯ ಉತ್ತಮವಾಗಿದ್ದು, ಇದರಿಂದಾಗಿಯೇ ಇಂತಹ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದು ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಹೇಳಿದರು.

ಪುತ್ತೂರಿನ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಶನಿವಾರ ನಗರದ ದರ್ಬೆಯ ಪ್ರಶಾಂತ್ ಮಹಲ್ನ `ಸನ್ನಿಧಿ ಹಾಲ್’ ನಲ್ಲಿ ನಡೆದ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಮತ್ತು ಕಡಬ ತಾಲ್ಲೂಕಿನ ಸಂಘದ ಶಾಖೆಗಳ ವ್ಯಾಪ್ತಿಯ ಆಯ್ದ ಸರ್ಕಾರಿ ಶಾಲೆಗಳಲ್ಲಿ 7 ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ 250 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆವಿದ್ಯಾನಿಧಿ -ಸಹಾಯಧನ ವಿತರಣಾ ಸಮಾರಂಭ’ ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಾಲ್ಯದ ದಿನಗಳಲ್ಲಿ ಕಷ್ಟಪಟ್ಟು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಬೆಳೆದಿರುವ ಸವಣೂರು ಸೀತಾರಾಮ ರೈ ಅವರು ಸಮಾಜದಲ್ಲಿ ಸದೃಢವಾಗಿ ಬೆಳೆದಿದ್ದಾರೆ. ಆದರೆ ಅವರು ತನ್ನ ಬಾಲ್ಯದ ಜೀವನವನ್ನು ಮರೆಯದೆ ತನ್ನ ಹಾಗೆಯೇ ಈಗಿನ ಮಕ್ಕಳು ಕೂಡ ಎತ್ತರಕ್ಕೆ ಬೆಳೆಯಬೇಕು ಎಂದು ಮಕ್ಕಳ ಶಿಕ್ಷಣಕ್ಕೆ ಸಹಾಯಧನ ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಅವರು ಮಾತನಾಡಿ, 250 ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿ ರೂ.31 ಲಕ್ಷ ವಿದ್ಯಾರ್ಥಿ ವೇತನ ನೀಡುವುದು ಸುಲಭದ ಕೆಲಸವಲ್ಲ. ಇಂದಿನ ದಿನಗಳಲ್ಲಿ ವ್ಯವಹಾರ ಮಾಡುವುದು ಎಷ್ಟು ಕಷ್ಟ, ಅದರಲ್ಲಿ ಎಷ್ಟು ಮಂದಿಯ ಶ್ರಮವಿದೆ, ರಾಜ್ಯದಲ್ಲಿ ಇಂತಹ ಕೆಲಸವನ್ನು ಎಷ್ಟು ಸಂಸ್ಥೆಗಳು ಮಾಡುತ್ತಿವೆ ಎಂಬುವುದನ್ನು ಹೆತ್ತವರು ತಿಳಿದುಕೊಳ್ಳಬೇಕು. ಇಷ್ಟೊಂದು ಮಂದಿ ಮಕ್ಕಳಿಗೆ ಸಹಾಯಧನ ನೀಡಿ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿರುವುದು ಸವಣೂರು ಸೀತಾರಾಮ ರೈ ಅವರಿಗೆ ಪರಿಸರದ ಮಕ್ಕಳ ಮೇಲಿರುವ ಅಭಿಮಾನವನ್ನು ತೋರಿಸುತ್ತದೆ ಎಂದರು.

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರರತ್ನ ಕೆ.ಸೀತಾರಾಮ ರೈ ಸವಣೂರು ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗೆ ತಲಾ ರೂ.2 ಸಾವಿರದಂತೆ ಒಟ್ಟು 250 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ-ಸಹಾಯಧನ ವಿತರಿಸಲಾಯಿತು.
ವೇದಿಕೆಯಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರರತ್ನ ಕೆ.ಸೀತಾರಾಮ ರೈ ಸವಣೂರು,ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ಸಂಘದ ನಿರ್ದೇಶಕರಾದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ವಕೀಲ ಅಶ್ವಿನ್ ಎಲ್.ಶೆಟ್ಟಿ,ಮುಖ್ಯ ಅತಿಥಿಯಾಗಿ ಕೆಯ್ಯೂರಿನ ಮಹಿಮರ್ದಿನಿ-ದುರ್ಗಾಮರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಯರಾಮ ರೈ ಎ.ಕೆ., ಮಹಾಪ್ರಬಂಧಕ ವಸಂತ ಜಾಲಾಡಿ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಸಂಘದ ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು, ಸಂಘದ ಪಂಜ ಶಾಖೆಯ ನಿವೃತ್ತ ವ್ಯವಸ್ಥಾಪಕ ಪರಮೇಶ್ವರ ಗೌಡ ಬಿ ಮತ್ತು ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಮತ್ತಿತ್ತರರು ಉಪಸ್ಥಿತರಿದ್ದರು.



