ಉಡುಪಿ: ವಾಟ್ಸಾಪ್ ನಲ್ಲಿ ಬಂದ ಮೆಸೇಜ್ ನಂಬಿ ಶೇರು ಮಾರ್ಕೆಟ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಮೈಸೂರು ಜಿಲ್ಲೆ ಹುಣಸೂರಿನ ನಿವಾಸಿ ಶೋಯಬ್ ಅಹಮದ್(28) ಮತ್ತು ಮುದ್ದಾಸಿರ್ ಅಹಮದ್(40) ಎಂದು ಗುರುತಿಸಲಾಗಿದೆ.

ಶಿವಳ್ಳಿ ಗ್ರಾಮದ ಪೆರಂಪಳ್ಳಿ ಅಂಬಾಗಿಲು ನಿವಾಸಿಯೊರ್ವರನ್ನು Capital Gains Crew ಎಂಬ ಟೆಲಿಗ್ರಾಂ ಗ್ರೂಪ್ ಗೆ ಆದಿ ನಿಹಾಲ್ ಎಂಬ ಅಪರಿಚಿತ ವ್ಯಕ್ತಿ ಸೇರ್ಪಡೆ ಮಾಡಿದ್ದು, ಬಳಿಕ Fidility Institutional Partners F – 101 ಗ್ರೂಪ್ ಗೆ ಸೇರಿಸಿದ್ದು ಈ ಗ್ರೂಪ್ ನಲ್ಲಿ ಶೇರು ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶ ನೀಡುವುದಾಗಿ ಮಾಹಿತಿ ಕಳುಹಿಸಿ ಅವರನ್ನು ನಂಬಿಸಿ ಹಣವನ್ನು ಹೂಡಿಕೆ ಮಾಡಲು ತಿಳಿಸಲಾಗಿತ್ತು.
ಅದನ್ನು ನಂಬಿದ ಅವರು ತನ್ನ ಮತ್ತು ಅವರ ತಾಯಿಯ ಬ್ಯಾಂಕ್ ಖಾತೆಯಿಂದ 2024 ಡಿಸೆಂಬರ್ 19 ರಿಂದ 2025 ಜನವರಿ 7 ರವರೆಗೆ ಅಪರಿಚಿತರು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 44 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಬಳಿಕ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ನೀಡಿರಲಿಲ್ಲ. ಇದರಿಂದ ತಾನು ಮೋಸ ಹೋದೆ ಎಂದು ಗೊತ್ತಾದ ಬಳಿಕ ಅವರು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳಿಂದ 2 ಲಕ್ಷ ರೂಪಾಯಿ ಹಣವನ್ನು ಮತ್ತು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರ ದಸ್ತಗಿರಿಗೆ ಶೋಧ ಕಾರ್ಯ ಮುಂದುವರಿದಿದೆ.



