ಶಿವಮೊಗ್ಗ: ಮಾಸ್ಕ್ ಧರಿಸಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ತೀರ್ಥ ಹಳ್ಳಿ ತಾಲೂಕಿನಲ್ಲಿರುವ ಪುರಾಣ ಪ್ರಸಿದ್ಧವಾದ ಶ್ರೀ ರಾಮೇಶ್ವರ ದೇಗುಲದಿಂದ 1 ಲಕ್ಷಕ್ಕೂ ಅಧಿಕ ಹಣ ಕದ್ದ ಕಳ್ಳನನ್ನು ಘಟನೆ ನಡೆದ ಮೂರು ದಿನದೊಳಗೆ ಪೊಲೀಸರು ಬಂಧಿಸಿದ್ದಾರೆ.

ಬಂಧನಕ್ಕೆ ಒಳಗಾದ ಆರೋಪಿಯಿಂದ ಎರಡು ಮೊಬೈಲ್ ಹಾಗೂ 20 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಮೊದಲಿಗೆ ಈತ ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಇದ್ದಂತಹ ಮಾಧವ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ. ಇದು ಪಕ್ಕದ ವೆಂಕಟರಮಣ ದೇವಸ್ಥಾನದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ನಂತರ ರಾಮೇಶ್ವರ ದೇವಸ್ಥಾನದ ಅನ್ನ ದಾಸೋಹ ಕೊಠಡಿಯಲ್ಲಿ ಇದ್ದ ಹಣವನ್ನು ಕಳ್ಳತನ ಮಾಡಿದ್ದ. ಅಷ್ಟೇ ಅಲ್ಲದೆ ಎರಡು ಮೊಬೈಲ್ ಕೂಡ ದೋಚಿದ್ದ ಎನ್ನಲಾಗಿದೆ.
ಅನ್ನ ದಾಸೋಹ ಕೊಠಡಿಯ ಹಲವು ಬಾಗಿಲುಗಳನ್ನು ಮುರಿದು ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಾಗೂ ಸಣ್ಣದೊಂದು ಕಾಣಿಕೆ ಹುಂಡಿ ಸಹ ತೆಗೆದು ಅದರಲ್ಲಿದ್ದ ಹಣ ದೋಚಿಕೊಂಡು ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.



