ಪುಂಜಾಲಕಟ್ಟೆ: ಸಮಾಜ ಸೇವೆಯಲ್ಲಿ ನಿರತರಾಗಿ, ಬಡ ಯುವತಿಯೋರ್ವಳ ಮದುವೆಗೆ ಕ್ರೌಡ್ ಫಂಡಿಂಗ್ ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ಮಹಿಳೆಯೋಬ್ಬರು ಹನಿಟ್ರ್ಯಾಪ್ ಗೆ ಬೀಳಿಸಿದ್ದು, ಪರಿಣಾಮ ನೊಂದ ವ್ಯಕ್ತಿ ಆತ್ಮಹ*ತ್ಯೆಗೆ ಯತ್ನಿಸಿದ ಘಟನೆ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಎಂಬಲ್ಲಿ ನಡೆದಿದೆ.
ಮಂಗಳೂರಿನ ಬಡ ಯುವತಿಯೋರ್ವಳ ಮದುವೆ ಉದ್ದೇಶಕ್ಕಾಗಿ ʼಅಲ್ ಮದೀನಾ ಟ್ರಸ್ಟ್ʼ ಹೆಸರಿನಲ್ಲಿ ಅಕ್ಬರ್ ಸಿದ್ದಿಕ್ ಎಂಬವರು ಹಣ ಸಂಗ್ರಹ ಮಾಡುತ್ತಿದ್ದರು. ಸುಮಾರು 25,000 ರೂ ಹಣ ಸಂಗ್ರಹವಾದ ಬಳಿಕ ಆ ಯುವತಿಯ ಸಂಬಂಧಿಯಾದ ಮಿನಾಜ್ ಎಂಬವರು, ಅಕ್ಬರ್ ಸಿದ್ದಿಕ್ ಅವರನ್ನು ಸಂಪರ್ಕಿಸಿದ್ದಲ್ಲದೆ ವಾಟ್ಸಾಪ್ ಮೂಲಕ ವಿಡಿಯೋ ಕಾಲ್, ಚಾಟಿಂಗ್ ಮಾಡಿದ್ದಾರೆ.
ಬಳಿಕ ಮಹಿಳೆ, ಸಮಾಜ ಸೇವೆ ಸೋಗಿನ ಆಸಿಫ್ ಆಪತ್ಭಾಂಧವ, ರವೂಫ್ ಬೆಂಗರೆ ಅವರ ಜೊತೆ ಸೇರಿ, ಅಕ್ಬರ್ ಸಿದ್ದಿಕ್ಗೆ ಕರೆ ಮಾಡಿ, 3 ಲಕ್ಷ ರೂ. ನಗದು ಮತ್ತು 3 ಪವನ್ ಚಿನ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಎ. 10ರ ಒಳಗಾಗಿ ಹಣ ಸಂದಾಯ ಮಾಡದಿದ್ದರೆ ಮಿನಾಜ್ ಜೊತೆಗಿನ ಚಾಟಿಂಗ್ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದು, ಇದರಿಂದ ಭೀತಿಗೊಳಗಾದ ಅಕ್ಬರ್ ಸಿದ್ಧಿಕ್ ಎ. 12ರಂದು ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ್ದಾರೆ.
ಈ ಕುರಿತು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.



