ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾವೂರು ಹಾಗೂ ಕುತ್ಲೂರು ಗ್ರಾಮಗಳ ದುರ್ಗಮ ಪ್ರದೇಶಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಬಹುಕಾಲದ ಬೇಡಿಕೆಗೆ ಮಹತ್ವದ ಸ್ಪಂದನೆ ದೊರೆತಿದೆ. 11 ಕೆ.ವಿ. ವಿದ್ಯುತ್ ವಿತರಣಾ ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸಲು ಅಗತ್ಯ ವನ್ಯಜೀವಿ ಅನುಮತಿ ದೊರೆತಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ನಾವೂರು ಗ್ರಾಮದ ಪುಳಿತ್ತಡಿ, ಎರ್ಮಲೆ ಹಾಗೂ ಕಾಸ್ರೋಳಿ ಎಸ್ಟಿ ಕಾಲೋನಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ 0.3189 ಹೆಕ್ಟೇರ್ ಪ್ರದೇಶದಲ್ಲಿ 11 ಕೆ.ವಿ. ವಿದ್ಯುತ್ ಮಾರ್ಗ ಅಳವಡಿಸಲು ಅನುಮತಿ ನೀಡಲಾಗಿದೆ.

ಅದೇ ರೀತಿ ಕುತ್ಲೂರು ಗ್ರಾಮದ ಬರೆಂಗಡಿ, ಅಂಜರೊಟ್ಟು, ಎರ್ಡಾಡಿ, ನಂಗಾಜೆ, ಪಂಜಾಳ, ಕೊಟ್ಟೆಂದಡ್ಕ, ಅಳಂಬ ಹಾಗೂ ಬಾರ್ಥಾಜೆ ಪ್ರದೇಶಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 11 ಕೆ.ವಿ. ಮಾರ್ಗವನ್ನು ಭೂಗತ ಕೇಬಲ್ ಮೂಲಕ ಅಳವಡಿಸುವ ಯೋಜನೆಗೂ ಅನುಮೋದನೆ ದೊರೆತಿದೆ. ಇದಕ್ಕಾಗಿ 0.8356 ಹೆಕ್ಟೇರ್ ಪ್ರದೇಶ ಬಳಕೆಗೆ ಅನುಮತಿ ನೀಡಲಾಗಿದೆ.

ಎರಡೂ ಯೋಜನೆಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 91ನೇ ಸಭೆಯಲ್ಲಿ ಪರಿಗಣಿಸಿ ಶಿಫಾರಸು ಮಾಡಲಾಗಿತ್ತು. ಅದರಂತೆ ಅಗತ್ಯ ವನ್ಯಜೀವಿ ಅನುಮತಿ ದೊರೆತಿದ್ದು, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಷರತ್ತುಗಳನ್ನು ವಿಧಿಸಲಾಗಿದೆ.

ಯೋಜನೆಯಡಿ ವಿದ್ಯುತ್ ಮಾರ್ಗವನ್ನು ಸಂಪೂರ್ಣವಾಗಿ ಭೂಗತ ಕೇಬಲ್ ಮೂಲಕವೇ ಅಳವಡಿಸಬೇಕಾಗಿದ್ದು, ಅರಣ್ಯ ಇಲಾಖೆಯ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಸಬೇಕು. ಪರಿಸರ ಮತ್ತು ವನ್ಯಜೀವಿಗಳಿಗೆ ಯಾವುದೇ ತೊಂದರೆಯಾಗದಂತೆ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯೊಳಗೆ ಮಾತ್ರ ಕಾಮಗಾರಿ ಕೈಗೊಳ್ಳುವಂತೆ ಷರತ್ತು ವಿಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಹರೀಶ್ ಪೂಂಜ, ದುರ್ಗಮ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅನುಮತಿ ದೊರಕಿಸಲು ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.

“ಅಭಿವೃದ್ಧಿಯ ಹಾದಿಯಲ್ಲಿ ಯಾವುದೇ ಗ್ರಾಮ, ಮನೆ ಹಾಗೂ ಕುಟುಂಬ ಹಿಂದುಳಿಯಬಾರದು ಎಂಬುದು ನಮ್ಮ ಬದ್ಧತೆ. ದುರ್ಗಮ ಪ್ರದೇಶದ ಜನರಿಗೂ ಅಗತ್ಯ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಮುಂದೆಯೂ ನಿರಂತರವಾಗಿ ಕೆಲಸ ಮಾಡಲಾಗುವುದು,” ಎಂದು ಅವರು ಹೇಳಿದ್ದಾರೆ.

ಅಗತ್ಯ ಇಲಾಖಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮೆಸ್ಕಾಂ ವತಿಯಿಂದ ಎರಡೂ ಯೋಜನೆಗಳ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ. ಯೋಜನೆಗಳಿಗೆ ಅನುಮತಿ ದೊರಕಿಸುವಲ್ಲಿ ಸಹಕರಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು, ಅರಣ್ಯ ಮತ್ತು ವನ್ಯಜೀವಿ ಇಲಾಖೆ, ಮೆಸ್ಕಾಂ ಹಾಗೂ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.



