ಬಂಟ್ವಾಳ: ರಾಷ್ಟ್ರೀಯ ವನಮಹೋತ್ಸವದ ಅಂಗವಾಗಿ ಬಂಟ್ವಾಳ ತಾಲೂಕಿನ ಅಮ್ಟಾಡಿಯ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಸೋಮವಾರ ವನಮಹೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲಾ ಆವರಣದಲ್ಲಿ ವಿದ್ಯಾರ್ಥಿ ನಾಯಕರಾದ ಧನ್ವಿತ್ ಹಾಗೂ ಪ್ರಣೂಷ್ ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿ ನಾಯಕರು ಹಾಗೂ ಸ್ಕೌಟ್-ಗೈಡ್ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ವಿವಿಧ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಶಿಕ್ಷಕ ಜಯಾನಂದ ಪೆರಾಜೆ ಮಾತನಾಡಿ, ಗಿಡಗಳನ್ನು ನೆಡುವ ಅಗತ್ಯತೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. “ಹಸಿರೇ ಉಸಿರು” ಎಂಬ ಸಂದೇಶವನ್ನು ನೀಡಿದ ಅವರು, ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಬೆಳೆಸುವುದು ಶಾಲೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಮನೆಯ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಅವುಗಳ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಶಿಕ್ಷಕಿ ಸುಜಾತ ಬಿ., ಸಹ ಮುಖ್ಯಶಿಕ್ಷಕಿ ಹೇಮಲತಾ, ಮಾಂಟೆಸ್ಸೋರಿ ಮುಖ್ಯಶಿಕ್ಷಕಿ ಸವಿತಾ ಕಿರಣ್, ಸಹ ಮುಖ್ಯಶಿಕ್ಷಕಿ ನಿಷಾ ಹಾಗೂ ಶಿಕ್ಷಕಿಯರಾದ ಪ್ರಿಯಾ, ಶ್ವೇತಾ ಕಿರಣ್, ವಿನಿತಾ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




