ಬಂಟ್ವಾಳ: ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷಣವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯ ಹಸ್ತವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ಪಡಿಸಿದ್ದಾರೆ.

ಅವರು ನಿನ್ನೆ ಸಿದ್ದಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಪಡೆದ ಅಂಗನವಾಡಿಯ ಹಿರಿಯ ವಿದ್ಯಾರ್ಥಿ ಕು. ಸೌರಭ ವಾಸುದೇವ ಆಚಾರ್ಯರವರು ಅಂಗನವಾಡಿಗೆ ಮರದ ಕಪಾಟನ್ನು ಕೊಡುಗೆಯಾಗಿ ನೀಡಿರುವುದಕ್ಜೆ ಬಾಲವಿಕಾಸ ಸಮಿತಿ ಹಾಗೂ ಪೋಷಕರ ವತಿಯಿಂದ ಗೌರವಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಾಕುಮಾರ ಚೌಟ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಗಬೆಟ್ಟುಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುರೇಶ್ ಕುಲಾಲ್ , ಗ್ರಾಮ ಪಂಚಾಯತ್ ಸದಸ್ಯರಾದ ಶಾಂತಾ, ಬೇನಾಡಿಕ್ಟ ಡಿ ಕೊಸ್ತ, ರೋಟರಿ ಕ್ಲಬ್ ಸದಸ್ಯರಾದ ನವೀನ್ ಶೆಟ್ಟಿ, ನೋಣಯ ಶೆಟ್ಟಿಗಾರ್, ಪ್ರಮೀಳಾ ದುರ್ಗದಾಸ್ ಶೆಟ್ಟಿ, ಪ್ರಮುಖರಾದ ವಾಸುದೇವ ಆಚಾರ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶಾಲಿನಿ, ಸಹಾಯಕಿ ಶಾರದಾ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.



