ಮೂರು ಗಂಟೆಗಳ ಕಾಲ ಚಿರತೆ ಬೋನಿನಲ್ಲಿ ಸಿಲುಕಿಕೊಂಡ ವ್ಯಕ್ತಿ

ಚಾಮರಾಜನಗರ: ಚಿರತೆಯನ್ನು ಹಿಡಿಯಲು ಇರಿಸಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿ 3 ಗಂಟೆಗಳ ಕಾಲ ಪರದಾಡಿ ಬಳಿಕ ಸ್ಥಳೀಯರು ರಕ್ಷಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ.

ರಾಮಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಚಿರತೆ ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಇದರ ಸೆರೆಗಾಗಿ ಗ್ರಾಮದಲ್ಲಿ ಎರಡು ಕಡೆ ಬೋನನ್ನು ಇರಿಸಿದ್ದರು. ಒಂದು ಬೋನನ್ನು ರಾಮಯ್ಯನವರ ಜಮೀನಿನಲ್ಲಿ ಇರಿಸಿದ್ದರು. ಕುತೂಹಲಕ್ಕಾಗಿ ಕಿಟ್ಟಿ ಎಂಬ ವ್ಯಕ್ತಿ ಬೆಳಿಗ್ಗೆ ಬೋನನ್ನು ನೋಡಲು ಒಬ್ಬರೇ ತೆರಳಿದ್ದಾರೆ. ಬೋನಿನೊಳಗೆ ಪ್ರವೇಶಿಸಿದ್ದಾರೆ ಆಗ ಬೋನಿನ ಬಾಗಿಲು ಮುಚ್ಚಿಕೊಂಡಿದೆ. ಇವರು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಇದನ್ನು ತೆರೆಯಲು ಸಾಧ್ಯವಾಗಿಲ್ಲ. ಮೊಬೈಲ್‌ ಇಲ್ಲದ ಕಾರಣ ಸಹಾಯಕ್ಕೆ ಕೂಗಿದರೂ ಯಾರಿಗೂ ಕೇಳಿಸಿರಲಿಲ್ಲ

ಮಧ್ಯಾಹ್ನ ಊಟಕ್ಕೆ ತೆರಳುತ್ತಿದ್ದ ದನಗಾಹಿಗಳು, ಗಮನಿಸಿದ ಬಳಿಕ ಗ್ರಾಮಸ್ಥರು ಬೋನಿನ ಬಾಗಿಲು ತೆರೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Leave a Reply

Your email address will not be published. Required fields are marked *