ಬಂಟ್ವಾಳ : ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಸಮುದಾಯದ ಪಾತ್ರ ಬಹಳ ಮುಖ್ಯ ಎಂದು ಜೆಸಿಐ ತರಬೇತಿದಾರ ಸಂದೀಪ್ ಸಾಲಿಯಾನ್ ಹೇಳಿದರು.

ಅವರು ನ.14ರಂದು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಪೋಷಕರ ಹಾಗೂ ಶಿಕ್ಷಕರ ಮಹಾಸಭೆ -2025 ರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರ ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳು ಶಿಕ್ಷಕರ ಜೊತೆ, ದಿನದಲ್ಲಿ ಕೇವಲ ಏಳು ಗಂಟೆ ಮಾತ್ರ ಇದ್ದು, ಹೆಚ್ಚಿನ ಸಮಯ ಪೋಷಕರ ಜೊತೆ ಇರುವುದರಿಂದ ಮಕ್ಕಳನ್ನು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಪೋಷಕರ ಪಾಲು ಬಹುದೊಡ್ಡದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವಿ ಅಂಚನ್ ವಹಿಸಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಮಾಡಿದ ವಿವಿಧ ಸ್ಪರ್ಧೆಯ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಸಮಿತಿಯ ಉಪಾಧ್ಯಕ್ಷೆ ಲಕ್ಷ್ಮಿ ಪ್ರಕಾಶ್, ತಾಯಂದಿರ ಸಮಿತಿಯ ಉಪಾಧ್ಯಕ್ಷೆ ರೇಖಾ, ಮಾಧ್ಯಮ ವರದಿಗಾರ ಚಿನ್ನಾ ಕಲ್ಲಡ್ಕ ಉಪಸ್ಥಿತರಿದ್ದರು.
ಮಕ್ಕಳು ಪ್ರಾರ್ಥಿಸಿ, ಶಿಕ್ಷಕಿ ಪ್ರವೀಣ ಕುಮಾರಿ ಸ್ವಾಗತಿಸಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ ಪ್ರಾಸ್ತಾವಿಕದೊಂದಿಗೆ ಶಾಲಾ ವರದಿ ವಾಚಿಸಿದರು, ಶಿಕ್ಷಕಿ ವಿಲ್ಮ ಪ್ರೆಸಿಲ್ಲ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿತ ಲಸ್ರಾದೊ ವಂದಿಸಿದರು.




