Breaking
23 Mar 2026, Mon

ನಿಮಿಷಾ ಪ್ರಿಯಾ ಪ್ರಕರಣದಲ್ಲಿ ಹೊಸ ಮಧ್ಯವರ್ತಿ ಪ್ರವೇಶ

ನವದೆಹಲಿ: ನಿಮಿಷಾ ಪ್ರಿಯಾ ಬಿಡುಗಡೆಗೆ ಸಂಬಂಧಿಸಿದಂತೆ ಮಾತುಕತೆಗಾಗಿ ಹೊಸ ಮಧ್ಯವರ್ತಿಯನ್ನು ನೇಮಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ಮೊದಲು, ಅರ್ಜಿ ಸಲ್ಲಿಸಿದ್ದ ಕೆ.ಎ. ಪೌಲ್ ಅವರೇ ಮಧ್ಯವರ್ತಿಯೇ? ಎಂಬ ನ್ಯಾಯಾಲಯದ ಪ್ರಶ್ನೆಗೆ, ಕೇಂದ್ರ ಸರ್ಕಾರ “ಅವರು ನೇಮಕಗೊಂಡವರಲ್ಲ” ಎಂಬ ಸ್ಪಷ್ಟನೆ ನೀಡಿದ್ದು, ಈ ಪ್ರಕರಣದ ವಿಚಾರಣೆ ಅ.16ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ.

ಕೇಂದ್ರ ಸರ್ಕಾರ, ಸದ್ಯದ ಪರಿಸ್ಥಿತಿಯಲ್ಲಿ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆಯಿದೆ ಎಂಬುದನ್ನು ನ್ಯಾಯಪೀಠಕ್ಕೆ ತಿಳಿಸಿದೆ. ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡಿದೆ.

ಕೇರಳ ಮೂಲದ ನಿಮಿಷಾ ಪ್ರಿಯಾ, ಯೆಮೆನ್‌ನಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಾರಂಭದಲ್ಲಿ ತಮ್ಮ ಪತಿ ಮತ್ತು ಮಗಳೊಂದಿಗೆ ಯೆಮೆನ್‌ನಲ್ಲಿ ವಾಸಿಸುತ್ತಿದ್ದ ಅವರು, ಜಾಗತಿಕ ಸಂದರ್ಭಗಳ ಪರಿಣಾಮವಾಗಿ ಕುಟುಂಬದವರು ಭಾರತಕ್ಕೆ ಹಿಂದಿರುಗಿದರು. ಆದರೆ, ಪ್ರಿಯಾ ಯೆಮೆನ್‌ನಲ್ಲಿಯೇ ಉಳಿದು, ತಲಾಲ್ ಎಂಬ ಸ್ಥಳೀಯ ವ್ಯಕ್ತಿಯೊಂದಿಗೆ ವ್ಯವಹಾರ ಪಾಲುದಾರಿಕೆ ರೂಪಿಸಿ ಕ್ಲಿನಿಕ್ ಆರಂಭಿಸಿದ್ದರು.

ಆದರೆ, ಉದ್ಯಮದ ನಿರ್ವಹಣೆಯ ಪ್ರಶ್ನೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ತಲಾಲ್ ಅವರಿಂದ ನಿರಂತರ ಕಿರುಕುಳಕ್ಕೆ ಒಳಗಾದ ಪ್ರಿಯಾ, ತೀವ್ರ ಹತಾಶೆಯಿಂದ ಕೊಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಯೆಮೆನ್ ನ್ಯಾಯಾಲಯ 2020ರಲ್ಲಿ ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ವಿಧಿಸಿತ್ತು.

ಯೆಮೆನ್‌ನ ಶರಿಯಾ ಕಾನೂನಿನ ಪ್ರಕಾರ, ಹತ್ಯೆಗೀಡಾದವನ ಪರ ಕುಟುಂಬ ಪರಿಹಾರ ಧನವನ್ನು ಸ್ವೀಕರಿಸಿದರೆ, ಮರಣದಂಡನೆ ಶಿಕ್ಷೆ ರದ್ದು ಮಾಡಬಹುದಾಗಿದೆ. ಈ ಹಿನ್ನಲೆಯಲ್ಲಿ, ಭಾರತದಿಂದ ಪ್ರಿಯಾ ಪರವಾಗಿ ಪರ್ಯಾಯ ಮಾರ್ಗಗಳ ಮೂಲಕ ಚರ್ಚೆಗಳು ನಡೆಯುತ್ತಿದ್ದು, ತಲಾಲ್ ಅವರ ಕುಟುಂಬ ಪರಿಹಾರ ಸ್ವೀಕರಿಸಲು ಒಪ್ಪಿಕೊಳ್ಳುವುದೇ ಈ ಪ್ರಕರಣದ ಮುಂದಿನ ದಿಕ್ಕಿಗೆ ಪ್ರಮುಖವಾಗಲಿದೆ. ಆದರೆ ಈವರೆಗೆ ಅವರು ಧನ ಸ್ವೀಕರಿಸಲು ಒಪ್ಪಿಲ್ಲ ಎಂದು ತಿಳಿದುಬಂದಿದೆ.

ಪ್ರಸ್ತುತ, ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ನೀಡಲಾಗಿದ್ದು, ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಮುಂದುವರಿಯುತ್ತಿದೆ. ಭಾರತ ಸರ್ಕಾರ ಈ ವಿಚಾರದಲ್ಲಿ ಎಲ್ಲಾ ಸಾಧ್ಯ ರಾಜತಾಂತ್ರಿಕ ಮತ್ತು ಮಾನವೀಯ ಮಾರ್ಗಗಳನ್ನು ಪ್ರಯತ್ನಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *