ಕಾಸರಗೋಡು: ಕಾರು ಡಿಕ್ಕಿ ಹೊಡೆದು ಪಾದಾಚಾರಿಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡುವಿನ ಬದಿಯಡ್ಕ ಬೋಳುಕಟ್ಟೆ ಬಳಿ ಅ.14 ರಂದು ಸಂಜೆ ನಡೆದಿದೆ.
ಬದಿಯಡ್ಕ ಸಮೀಪದ ಚೆಂಬಲ್ತಿಮಾರ್ ನಿವಾಸಿ, ಕೃಷಿಕ ಗೋಪಾಲಕೃಷ್ಣ ಭಟ್ (74) ಮೃತ ದುರ್ದೈವಿಯಾಗಿದ್ದಾರೆ.

ಕೆಲಸ ನಿಮಿತ್ತ ಬೋಳುಕಟ್ಟೆ ಭಾಗಕ್ಕೆ ಹೋಗಿದ್ದ ಗೋಪಾಲಕೃಷ್ಣ ಭಟ್ ಸಂಜೆ 7.15ಕ್ಕೆ ಸುಮಾರಿಗೆ ಮನೆಗೆ ಹಿಂತಿರುಗಲು ರಸ್ತೆ ದಾಟುತ್ತಿದ್ದ ವೇಳೆ ಅಪಘಾತ ಉಂಟಾಗಿದೆ. ಮುಳ್ಳೇರಿಯ ಭಾಗದಿಂದ ಬದಿಯಡ್ಕ ಭಾಗಕ್ಕೆ ಬರುತ್ತಿದ್ದ ಕಾರು ಇವರಿಗೆ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡ ಗೋಪಾಲಕೃಷ್ಣ ಭಟ್ಟರನ್ನು ಕೂಡಲೇ ಕಾಸರಗೋಡು ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತು. ಆದರೆ ಆ ವೇಳೆ ಅವರು ಮೃತಪಟ್ಟಿದ್ದರು.

ಮೃತರು ಪತ್ನಿ ವೈಜಯಂತಿ, ಮಕ್ಕಳಾದ ಶ್ರೀ ಲಕ್ಷ್ಮ, ಶ್ರೀ ವಿದ್ಯ, ಅಳಿಯಂದಿರಾದ ಮನುಶರ್ಮ, ವಿನೋದ್ ಕುಮಾರ್, ಸಹೋದರ ಸಹೋದರಿಯರಾದ ಮಹಾಬಲೇಶ್ವರ ಭಟ್, ಗಣೆಅಜ ಭಟ್, ರಾಜೇಶ್ವರಿ, ಪುಷ್ಪಲತ, ವಿಜಯ ಲತ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.




