Breaking
23 Mar 2026, Mon

ಉಡುಪಿಯ ದತ್ತು ಸ್ವೀಕಾರ ಕೇಂದ್ರದಿಂದ 14 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಪತ್ತೆ

ಉಡುಪಿ: 14 ವರ್ಷಗಳ ಹಿಂದೆ ಉಡುಪಿಯ ದತ್ತು ಸ್ವೀಕಾರ ಕೇಂದ್ರದಿಂದ ನಾಪತ್ತೆಯಾಗಿದ್ದ ವಿಶೇಷ ಚೇತನ ಬಾಲಕನನ್ನು ಉಡುಪಿ ಪೊಲೀಸರ ತಂಡ ಪತ್ತೆಹಚ್ಚಿದೆ.

ಸಂತೋಷ್ (12) ಎಂಬ ಮಾನಸಿಕ ಅಸ್ವಸ್ಥ ಬಾಲಕನು, 2011ರ ಫೆಬ್ರವರಿ 23ರಂದು ಉಡುಪಿಯ ಸಂತೆಕಟ್ಟೆಯಲ್ಲಿರುವ ಶ್ರೀ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಿಂದ ಕಾಣೆಯಾಗಿದ್ದ ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು.

ಕಾಣೆಯಾದ ಮಗುವನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಿ, ವ್ಯಾಪಕ ತನಿಖೆ ಮತ್ತು ಅನೇಕ ಮೂಲಗಳಿಂದ ಪರಿಶೀಲನೆ ನಡೆಸಿದ ನಂತರ, ತಂಡವು ಕಾರ್ಕಳದ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿ ನೆಲೆಸಿದ್ದ ಬಿಪಿನ್ ಎಂಬ ಬಾಲಕನನ್ನು ಪತ್ತೆಹಚ್ಚಿತು.

ಹೆಚ್ಚಿನ ಪರಿಶೀಲನೆಯಲ್ಲಿ, ಬಿಪಿನ್ ಕಾಣೆಯಾದ ಬಾಲಕ ಸಂತೋಷ್ ನನ್ನು ಹೆಚ್ಚು ಹೋಲುತ್ತಿರುವುದು ಕಂಡುಬಂದಿದೆ. ಬಾಲಕನ ಮುಖದ ಲಕ್ಷಣಗಳು, ಅಂದಾಜು ವಯಸ್ಸು, ನಿಲುವು ಮತ್ತು ಒಟ್ಟಾರೆ ವರ್ತನೆಯನ್ನು ಹೋಲಿಸಿ ಪೊಲೀಸರು ಅವನ ಗುರುತನ್ನು ದೃಢಪಡಿಸಿದ್ದಾರೆ.

ದೂರುದಾರರಾದ ಮೆರೀನಾ ಎಲಿಜಬೆತ್ ಮತ್ತು ಸಂತೋಷ್ ನಾಪತ್ತೆಯಾಗಿದ್ದಾಗ ದತ್ತು ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಸಿಬ್ಬಂದಿ ಶಾಂತಿ ಅವರ ಸಮ್ಮುಖದಲ್ಲಿ ಈ ದೃಢೀಕರಣ ಮಾಡಲಾಗಿದ್ದು, ಇಬ್ಬರೂ ಆ ಬಾಲಕ ಸಂತೋಷ್ ಎಂದು ಗುರುತಿಸಿದ್ದಾರೆ. 2018 ರಿಂದ ಈತ ಅಲ್ಲೇ ಆಶ್ರಯ ಪಡೆಯುತ್ತಿದ್ದ.

ಸಂತೋಷ್ ಮಾನಸಿಕ ಅಸ್ವಸ್ಥನಾಗಿರುವುದರಿಂದ, ಆತನ ಜೈವಿಕ ಪೋಷಕರು ಪತ್ತೆಯಾಗುವವರೆಗೆ ಕಾರ್ಕಳದ ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲೇ ಉಳಿಯುವಂತೆ ಉಡುಪಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಸಲಹೆ ನೀಡಿದೆ.

ಉಡುಪಿ ಡಿವೈಎಸ್‌ಪಿ ಪ್ರಭು ಡಿ ಟಿ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದ್ದು, ಪಿಎಸ್‌ಐಗಳಾದ ಸುದರ್ಶನ್ ದೊಡ್ಡಮನಿ, ಈರಣ್ಣ ಶಿರಗುಂಪಿ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್, ಚೇತನ್, ಸಂತೋಷ್ ದೇವಾಡಿಗ, ಮತ್ತು ಮಲ್ಲಯ್ಯ ಹಿರೇಮಠ್ ಅವರು ತಂಡದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *