ಬಂಟ್ವಾಳ: ತಾಲೂಕಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಶಿಕ್ಷಕರಿಗೆ ಮತ್ತು ಎಂಜಿನಿಯರ್ಸ್ ಗಳಿಗೆ ‘ರಾಷ್ಟ್ರ ನಿರ್ಮಾತೃ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮವು ಸೆ . 24 ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಸಹಾಯಕ ಗವರ್ನರ್ ಉಮೇಶ್ ಮಿಜಾರ್ ಅವರು ದೇಶದಲ್ಲಿ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಗೌರವದ ಜೊತೆಗೆ ಸುಸಂಸ್ಕೃತ ಮತ್ತು ಸುಶಿಕ್ಷಿತ ಸಮಾಜ ನಿರ್ಮಾಣ ಶಿಲ್ಪಿಯಾಗಿ ಶಿಕ್ಷಕ ಸಮೂಹ ಗುರುತಿಸಿಕೊಂಡಿದೆ ಎಂದರು.

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಇಬ್ಬರು ಸಾಧಕ ಶಿಕ್ಷಕರಾದ ಬಿ.ವಿಶ್ವನಾಥ ಗೌಡ ವಿಟ್ಲ ಮತ್ತು ಟಿ.ಭಾಸ್ಕರ ರಾವ್ ಕೊಡ್ಮಾಣ್ ಇವರಿಗೆ ‘ಅಂತರ್ ರಾಷ್ಟ್ರೀಯ ರೋಟರಿ ರಾಷ್ಟ್ರ ನಿರ್ಮಾತೃ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕ ಗೋಪಾಲಕೃಷ್ಣ ನೇರಳಕಟ್ಟೆ ಇವರು ಮಾಹಿತಿ ನೀಡಿದರು. ಇದೇ ವೇಳೆ ವಿವಿಧ ಎಂಜಿನಿಯರ್ ಮತ್ತು ಶಿಕ್ಷಕರನ್ನು ಗುರುತಿಸಿ ಅಭಿನಂದಿಸಲಾಯಿತು. ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಮತ್ತು ರೂಪಾ ರಾಜೇಶ್ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಸುರೇಶ ಶೆಟ್ಟಿ, ಕೋಶಾಧಿಕಾರಿ ಅರುಣ್ ಮಾಡ್ತಾ, ಪ್ರಮುಖರಾದ ರಾಘವೇಂದ್ರ ಭಟ್, ಎಂ.ಪದ್ಮರಾಜ ಬಲ್ಲಾಳ್, ಶೃತಿ ಮಾಡ್ತಾ, ಸಂದೇಶ ಶೆಟ್ಟಿ ಪೊಡುಂಬ ಮತ್ತಿತರರು ಉಪಸ್ಥಿತರಿದ್ದರು.
ಕ್ಲಬ್ ನ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಶುಭ ಹಾರೈಸಿದರು. ಕ್ಲಬ್ ನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಸದಸ್ಯರಾದ ನೆಲ್ಸನ್ ಮೋನಿಸ್ ಮತ್ತು ಕೆ.ರಮೇಶ ನಾಯಕ್ ರಾಯಿ ಕಾರ್ಯಕ್ರಮ ನಿರೂಪಿಸಿದರು.



