ಕುಂದಾಪುರ: ಕಾಲೇಜಿಗೆ ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ಹೆಮ್ಮಾಡಿಯ ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬನ ಮೃತದೇಹ ಇಂದು(ಸೆ.20) ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ಹೆಮ್ಮಾಡಿ ಸಂತೋಷನಗರದ ನಿವಾಸಿ ಲವೇಶ್ ಪೂಜಾರಿಯ ಪುತ್ರ ನಮೇಶ್ (17) ಎಂದು ಗುರುತಿಸಲಾಗಿದೆ.

ಸೆ. 18 ರಂದು ಮನೆಯಿಂದ ಕಾಲೇಜಿಗೆ ತೆರಳಿದ್ದ ನಮೇಶ್, ಮನೆಗೆ ವಾಪಾಸಾಗದೆ ನಾಪತ್ತೆಯಾಗಿದ್ದ. ಆತನ ಬೈಕ್ ಹಾಗೂ ಕಾಲೇಜು ಬ್ಯಾಗ್ ಹೆಮ್ಮಾಡಿ ಸಮೀಪದ ಕನ್ನಡ ಕುದ್ರು ನದಿತೀರದಲ್ಲಿ ಪತ್ತೆಯಾಗಿತ್ತು . ಆತ ನದಿಗೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಕುಂದಾಪುರ ನಗರ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜುಗಾರರು ಸ್ಥಳಕ್ಕೆ ಧಾವಿಸಿ ಎರಡು ದಿನಗಳ ಕಾಲ ತೀವ್ರ ಹುಡುಕಾಟ ನಡೆಸಿದರು. ಕೊನೆಗೂ ಇಂದು ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



