ಉಡುಪಿ: ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ಬರೇಗುಂಡಿ ಎಂಬಲ್ಲಿ ಸೆ.17 ರಂದು ನಡೆದಿದೆ.
ಸಿದ್ದಾಪುರದಲ್ಲಿರುವ ಛಾತ್ರ ಎಂಟರ್ಪ್ರೈಸಸ್ನ ಮಾಲೀಕ ಉದಯ ಛಾತ್ರ (43) ಅವರು ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತ ಉದ್ಯಮಿ ಉದಯ ಛಾತ್ರ ಅವರು ಬೆಳಗ್ಗೆ ಕಮಲಶಿಲೆಯಲ್ಲಿ ನಡೆದ ಮಣಂಜೆ ಕೃಷಿ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಗೆ ಪೋಷಕರು ಮತ್ತು ಪತ್ನಿಯೊಂದಿಗೆ ಹಾಜರಾಗಿದ್ದರು. ಅವರನ್ನು ಸಭೆಯಲ್ಲಿ ಬಿಟ್ಟ ನಂತರ ಸಿದ್ದಾಪುರದಲ್ಲಿರುವ ತಮ್ಮ ವ್ಯಾಪಾರ ಸಂಸ್ಥೆ ಛಾತ್ರ ಎಂಟರ್ಪ್ರೈಸಸ್ಗೆ ಹೋಗುತ್ತಿರುವುದಾಗಿ ಹೇಳಿದ್ದರು.

ಆದರೆ ಅಲ್ಲಿಗೆ ಹೋಗುವ ಬದಲು ನೇರವಾಗಿ ಮನೆಗೆ ಹಿಂತಿರುಗಿ ಮೇಲಿನ ಮಹಡಿಯ ಕೋಣೆಗೆ ಹೋಗಿ ಸೀಲಿಂಗ್ ಫ್ಯಾನ್ ಕೊಕ್ಕೆಗೆ ನೈಲಾನ್ ಹಗ್ಗ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಉದಯ ಅವರು ಪೋಷಕರು, ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ.
ಉದಯ ಛಾತ್ರ ಅವರ ಪತ್ನಿ ಅಕ್ಷರಾ ಛತ್ರ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


